ಸ್ವಾಗತ ಸಮಾರಂಭ ಒಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೇನಕಾರವರ ಬಳಿ ಹಿರಿಯರೊಬ್ಬರು ಗೋಮತಿ ನದಿಯನ್ನು ಶಾರದಾ ನದಿಯ ಜತೆ ಜೋಡಿಸುವ ಸಲಹೆ ನೀಡಿದರು. ಆಗ ಅದು ಅತ್ಯಂತ ಅಪಾಯಕಾರಿ ಎಂದು ಉದ್ಘರಿಸಿದ ಗಾಂಧಿ "ನದಿಗಳನ್ನು ಜೋಡಿಸುವ ಮಹತ್ವಪೂರ್ಣ ಯೋಜನೆ ವಾಜಪೇಯಿ ಸರಕಾರದ ಕಚೇರಿಯಲ್ಲಿ ಉಲ್ಲೇಖಿಸಲ್ಪಟ್ಟಿತ್ತು. ಆದರೆ ಅದು ಜಾರಿಯಾಗುವುದನ್ನು ವಾಜಪೇಯಿ ತಡೆದಿದ್ದರು" ಎಂದರು.
ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಮೋದಿ ಬರ ಮತ್ತು ಪ್ರವಾಹದಿಂದ ಮುಕ್ತಿ ಪಡೆಯಲು ನದಿಗಳ ಜೋಡಣೆಯ ಅವಶ್ಯಕತೆ ಇದೆ ಎಂಬುದನ್ನು ಒತ್ತಿ ಹೇಳಿದ್ದರು. ಆದರೆ ಈ ಯೋಜನೆಗೆ ಮೇನಕಾ ಪ್ರಬಲ ವಿರೋಧ ವ್ಯಕ್ತ ಪಡಿಸಿದ್ದಾರೆ. "ಆ ಯೋಜನೆಯನ್ನು ಅಸ್ತಿತ್ವಕ್ಕೆ ತರುವುದು ಬೇಡ ಎಂದು ನಾನೇ ವಾಜಪೇಯಿ ಅವರನ್ನು ತಡೆದಿದ್ದೆ, ಈ ತರಹದ ಯೋಜನೆಗಳು ಅಸಂಬದ್ಧ ಎಂದಷ್ಟೇ ಹೇಳಬಹುದು" ಎಂದು ಅವರು ಹೇಳಿದ್ದಾರೆ.
"ಜಗತ್ತಿನಲ್ಲಿ ಈ ಯೋಜನೆಯಷ್ಟು ಕೆಟ್ಟ ಯೋಜನೆ ಮತ್ತೊಂದಿರಲಾರದು. ಪ್ರತಿ ನದಿ ತನ್ನದೆ ಆದ ಪ್ರತ್ಯೇಕ ವಿಶೇಷತೆಯನ್ನು ಹೊಂದಿರುತ್ತದೆ. ಪ್ರತಿ ನದಿಯ ನೀರು ಮತ್ತು ಅದರಲ್ಲಿ ವಾಸಿಸುವ ಮೀನುಗಳಲ್ಲಿ ವಿಭಿನ್ನತೆ ಇರುತ್ತದೆ. ಒಂದು ವೇಳೆ ಎರಡು ನದಿಗಳನ್ನು ಜೋಡಿಸಿದರೆ, ಅವರಡು ನಾಶವಾಗಿ ಹೋಗುತ್ತವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ".