ದೇಶದಲ್ಲಿ ಭೃಷ್ಟಾಚಾರವನ್ನು ಬೇರು ಸಮೇತ ಕಿತ್ತೊಗೆಯುತ್ತೇನೆ ಎಂದು ಪ್ರಧಾನಿ ಮೋದಿ ಶಪಥಗೈದಿದ್ದಾರೆ. ಕತಾರ್ನ ದೋಹಾದಲ್ಲಿ ಭಾನುವಾರ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ದೇಶದಲ್ಲಿ ಹಲವರ ಸಿಹಿಊಟವನ್ನು ನಾನು ನಿಲ್ಲಿಸಿದ್ದೇನೆ. ಇದರಿಂದಾಗಿ ಹಲವು ಸಮಸ್ಯೆಗಳನ್ನೂ ಎದುರಿಸುವಂತಾಯಿತು ನಿಜ. ಆದರೆ ಸರ್ಕಾರಿ ಯೋಜನೆಗಳಲ್ಲಿ ಸೋರಿಕೆ ಮತ್ತು ಕಳ್ಳತನವನ್ನು ತಡೆಗಟ್ಟಿದ್ದರಿಂದ ದೇಶದ ವಾರ್ಷಿಕ 36 ಸಾವಿರ ಕೋಟಿ ರೂಪಾಯಿ ಹಣವನ್ನು ಉಳಿಸಿದ್ದೇನೆ ಎಂದಿದ್ದಾರೆ.
1.62 ಕೋಟಿ ನಕಲಿ ಪಡಿತರ ಕಾರ್ಡ್ ಪತ್ತೆ ಹಚ್ಚಿ ಕೋಟ್ಯಾಂತರ ರೂಪಾಯಿ ಮೌಲ್ಯದ ಅನುದಾನಿತ ಗೋಧಿ, ಅಕ್ಕಿ, ಸೀಮೆಎಣ್ಣೆ ಹಾಗೂ ಎಲ್ಪಿಜಿ ದುರ್ಬಳಕೆ, ಸೋರಿಕೆಯನ್ನು ತಡೆಯಲಾಗಿದೆ. ಗೆದ್ದಲಿನಂತೆ ಜೀವಾಧಾರಕಗಳನ್ನು ತಿನ್ನುವುದರ ಮೂಲಕ ಭೃಷ್ಟಾಚಾರ ನಮ್ಮ ದೇಶವನ್ನು ಟೊಳ್ಳಾಗಿಸಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.