ಸುನಂದಾ ಪುಷ್ಕರ್ ಹತ್ಯೆ ಪ್ರಕರಣ: ಅಮರ್ ಸಿಂಗ್ ವಿಚಾರಣೆ ನಡೆಸಿದ ಎಸ್‌ಐಟಿ

ಬುಧವಾರ, 28 ಜನವರಿ 2015 (15:29 IST)
ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್‌ರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
 
ದೆಹಲಿ ಪೊಲೀಸ್ ಆಯುಕ್ತ ಬಿಎಸ್.ಬಸ್ಸಿ ಸುದ್ದಿಗಾರರೊಂದಿಗೆ ಮಾತನಾಡಿ, ಸುನಂದಾ ಪುಷ್ಕರ್ ಹತ್ಯೆಗೆ ಸಂಬಂಧಿಸಿದಂತೆ ಯಾವುದಾದರೂ ಮಾಹಿತಿಗಳು ಲಭ್ಯವಿವೆಯೇ ಎನ್ನುವ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
 
ಅಮರ್ ಸಿಂಗ್ ಮಾಧ್ಯಮಗಳ ಮುಂದೆ ಸುನಂದಾ ಅವರ ಬಗ್ಗೆ ಕೆಲ ಹೇಳಿಕೆಗಳನ್ನು ನೀಡಿದ್ದರು. ಆದ್ದರಿಂದ ಮತ್ತಷ್ಟು ಮಾಹಿತಿ ಅವರಲ್ಲಿವೆಯೇ ಎನ್ನುವುದನ್ನು ತಿಳಿಯಲು ಇಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
 
ಸುನಂದ ಪುಷ್ಕರ್ ಹತ್ಯೆಯಾಗುವ ಎರಡು ದಿನಗಳ ಮುಂದೆ ನನಗೆ ಕರೆ ಮಾಡಿ ಐಪಿಎಲ್ ವಿವಾದದ ಬಗ್ಗೆ ಚರ್ಚಿಸಿದ್ದರು ಎಂದು ಅಮರ್ ಸಿಂಗ್ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದನ್ನು ಸ್ಮರಿಸಬಹುದು. 
 
ಇದಕ್ಕಿಂತ ಮೊದಲು ಇಬ್ಬರು ಪತ್ರಕರ್ತರು ಎಸ್‌ಐಟಿ ಮುಂದೆ ಹೇಳಿಕೆ ನೀಡಿ ಸುನಂದಾ ಹತ್ಯೆಯಾಗುವ ಮುನ್ನ ನಮಗೆ ಕರೆ ಮಾಡಿ ಶಶಿ ತರೂರ್ ಅವರ ಅವ್ಯವಹಾರಗಳನ್ನು ಬಹಿರಂಗಪಡಿಸುವಂತೆ ಕೋರಿದ್ದರು ಎಂದು ಮಾಹಿತಿ ನೀಡಿದ್ದರು. 
 

ವೆಬ್ದುನಿಯಾವನ್ನು ಓದಿ