ಕನ್ಹೈಯಾ ಕುಮಾರ್ ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಶುಕ್ರವಾರ, 19 ಫೆಬ್ರವರಿ 2016 (12:22 IST)
ದೇಶದ್ರೋಹಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಬಂಧಿತನಾಗಿರುವ ದೆಹಲಿಯ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ನಾಯಕ ಕನ್ಹೈಯ್ಯಾ ಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನಿಯಮದ ಪ್ರಕಾರ ಮೊದಲು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. 
 
ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿರುವ ಕನ್ಹೈಯ್ಯಾ ಕುಮಾರ್, ತಿಹಾರ್ ಜೈಲಿನಲ್ಲಿ ತಮಗೆ ಪ್ರಾಣ ಭೀತಿ ಇದ್ದು, ಜಾಮೀನು ಮಂಜೂರುಗೊಳಿಸುವಂತೆ ಜಾಮೀನು ಅರ್ಜಿ ಸಲ್ಲಿಸಿದ್ದರು.  
 
ಕುಮಾರ್ ಪರ ವಕೀಲರಾದ ಅನಿಂದಿತಾ ಪೂಜಾರಿ ಹೈಕೋರ್ಟ್‌ನಲ್ಲಿ ಸಹ ಅವರಿಗೆ ಭದ್ರತೆ ಇಲ್ಲ ಎಂಬ ವಿಚಾರವನ್ನು ಮುಂದಿಟ್ಟಾಗ  ಭದ್ರತೆಯೊಂದಿಗೆ ಅರ್ಜಿ ಸಲ್ಲಿಸಿ, ಅಲ್ಲಿ ಜಾಮೀನು ಪಡೆಯಲು ವಿಫವಾದರೆ ಇಲ್ಲಿಗೆ ಬನ್ನಿ ಎಂದು ಸೂಚಿಸಿದೆ.
 
ತುರ್ತು ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ಸಹ ಸುಪ್ರೀಂ ಸೂಚಿಸಿದ್ದು, ಕನ್ಹೈಯ್ಯಾ ಪರ ವಕೀಲರು ಇಂದು ಮಧ್ಯಾಹ್ನ 2 ಗಂಟೆಯೊಳಗೆ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಹೈಕೋರ್ಟ್ ಇಂದೇ ವಿಚಾರಣೆಯನ್ನು ಕೈಗೆತ್ತಿಕೊಂಡರೆ ಕನ್ಹೈಯ್ಯಾ ಕುಮಾರ್‌ಗೆ ಇಂದು ಸಂಜೆಯೊಳಗೆ ಜಾಮೀನು ಸಿಗಬಹುದು. ಆದರೆ ಇಂದು ಜಾಮೀನು ಸಿಗದಿದ್ದರೆ ಸೋಮವಾರದವರೆಗೆ ಅವರಿಗೆ ಜೈಲೇ ಗತಿಯಾಗಲಿದೆ. 

ವೆಬ್ದುನಿಯಾವನ್ನು ಓದಿ