ಸ್ವಚ್ಛ ಭಾರತ ಅಭಿಯಾನ ಕೇವಲ ತೋರಿಕೆ: ಕೇಜ್ರಿವಾಲ್

ಶನಿವಾರ, 3 ಅಕ್ಟೋಬರ್ 2015 (17:22 IST)
ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, 'ಸ್ವಚ್ಛ ಭಾರತ ಅಭಿಯಾನ ಕೇವಲ ಶೋಬಾಜಿ', ಎಂದು ಆರೋಪಿಸಿದ್ದಾರೆ.
 
ಸ್ವಚ್ಛ ಭಾರತ ಅಭಿಯಾನದ ಪ್ರಥಮ ವಾರ್ಷಿಕೋತ್ಸವದ ದಿನವಾದ ಅಕ್ಯೋಬರ್ 2 ರಂದು, ಮೋದಿಯವರ ಹೆಸರನ್ನೆತ್ತದೆ ಹರಿಹಾಯ್ದ ಕೇಜ್ರಿವಾಲ್, 'ಕಳೆದೊಂದು ವರ್ಷದಿಂದ ಏನೂ ಕಾರ್ಯಸಾಧನೆಯಾಗಿಲ್ಲ. ಕಳೆದ ವರ್ಷ ಇದು ಪ್ರಾರಂಭವಾಯಿತು ಮತ್ತು ದೇಶದ ಇತರ ನಾಗರಿಕರ ಜತೆ ನಾನು ಕೂಡ ಇದರಲ್ಲಿ ಪಾಲ್ಗೊಂಡೆ. ಭಾರತ ಈಗಲಾದರೂ ಬದಲಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಅದು ಈಗ ಹುಸಿ ಎಂದು ಸಾಬೀತಾಗಿದೆ', ಎಂದಿದ್ದಾರೆ. 
 
'ಕಳೆದೊಂದು ವರ್ಷದಿಂದ ಸ್ವಚ್ಛಭಾರತ ಅಭಿಯಾನದ ಶೋಬಾಜಿ ನಡೆಯುತ್ತಿದೆ ಅಥವಾ ಕೇವಲ ಜಾಹೀರಾತುಗಳು ವಿಜೃಂಭಿಸುತ್ತಿವೆ.  ಒಂದೇ ಒಂದು ಬೀದಿ ಸ್ವಚ್ಛಗೊಂಡಿರುವುದು ಸಹ ನನ್ನ ಗಮನಕ್ಕೆ ಬಂದಿಲ್ಲ. ಎಲ್ಲರೂ ಈ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ನಾನು ಹೇಳಬಯಸುತ್ತೇನೆ. ಕಡಿಮೆ ಮಾತನಾಡೋಣ ಮತ್ತು ಕೆಲಸವನ್ನು ಜಾಸ್ತಿ ಮಾಡೋಣ', ಎಂದು ಅವರು ಕರೆ ಕೊಟ್ಟಿದ್ದಾರೆ. 
 
ರಾಜ್ಯ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ 750 ಶೌಚಾಲಯಗಳನ್ನು ಕಟ್ಟಲಿದೆ ಎಂದು ಅವರು ಭರವಸೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ