125 ಕೋಟಿ ಜನತೆಯ ಟೀಂ ಇಂಡಿಯಾ: ಪ್ರಧಾನಿ ಮೋದಿ

ಶನಿವಾರ, 15 ಆಗಸ್ಟ್ 2015 (18:18 IST)
ಭಾರತದ ಏಕತೆ ಮತ್ತು ವೈವಿಧ್ಯತೆಗೆ ಒತ್ತುನೀಡುತ್ತಾ,ಜಾತೀಯತೆ ಮತ್ತು ಕೋಮುವಾದದ ವಿಷಬೀಜಕ್ಕೆ ನಮ್ಮ ರಾಷ್ಟ್ರದಲ್ಲಿ ಜಾಗವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಕೆಂಪುಕೋಟೆಯಿಂದ ತಮ್ಮ ಎರಡನೇ ಸ್ವಾತಂತ್ರ್ಯ ದಿನಾಚರಣೆ ಭಾಷಣವನ್ನು  ಮಾಡಿದ  ನರೇಂದ್ರ ಮೋದಿ ಭ್ರಷ್ಟಾಚಾರ ವಿಷಯದ ಬಗ್ಗೆ ಹೆಚ್ಚು ಗಮನಸೆಳೆದರು.

ಭ್ರಷ್ಟಾಚಾರದ ಪಿಡುಗಿನ ವಿರುದ್ಧ ಸರ್ಕಾರ ಕಳೆದ 15 ತಿಂಗಳಿಂದ ತೆಗೆದುಕೊಂಡ ಕ್ರಮ ಫಲ ನೀಡಲಾರಂಭಿಸಿವೆ ಎಂದು ನುಡಿದರು. 
ಪ್ರತಿಯೊಬ್ಬ ಭಾರತೀಯನಲ್ಲಿ ಸರಳತೆ ತುಂಬಿದೆ ಮತ್ತು ಭಾರತದ ಪ್ರತಿ ಮೂಲೆಯಲ್ಲಿ ಏಕತೆ ತುಂಬಿದೆ. ಭಾರತದಲ್ಲಿ ಶಕ್ತಿ ತುಂಬಿದೆ. ದೇಶದ ಏಕತೆ ನಾಶವಾದರೆ ಜನರ ಕನಸು ಕೂಡ ನಾಶವಾಗುತ್ತದೆ ಎಂದು ಮೋದಿ ಮಾರ್ಮಿಕವಾಗಿ ಹೇಳಿದರು. 
 
ಭ್ರಷ್ಟಾಚಾರ ನಿವಾರಣೆ ಮಾಡಿ, ಪಾರದರ್ಶಕತೆ ತರುವ ಬಗ್ಗೆ ಕೈಗೊಂಡ ಅನೇಕ ಉಪಕ್ರಮಗಳನ್ನು ಮೋದಿ ವಿವರಿಸಿದರು.85 ನಿಮಿಷಗಳ ಸುದೀರ್ಘ ಭಾಷಣದಲ್ಲಿ ಮೋದಿ ಹೆಚ್ಚು ನಿರೀಕ್ಷಿತ  ಸಮಾನ ದರ್ಜೆ, ಸಮಾನ ಪಿಂಚಣಿ ಯೋಜನೆ ಕುರಿತು ಮಾತನಾಡಿದರು.  ಆದರೆ ಅದರ ಅನುಷ್ಠಾನಕ್ಕೆ ಯಾವುದೇ ಕಾಲಮಿತಿಯನ್ನು ನೀಡಲು ಮೋದಿ ವಿಫಲರಾದರು. 
 
ಮಾತುಕತೆಯ ಆಧಾರದ ಮೇಲೆ ಶುಭಸುದ್ದಿ ಕೇಳಲಿದ್ದೀರಿ ಎಂದು ಮಾತ್ರ ಮಾಜಿ ಯೋಧರಿಗೆ ಭರವಸೆ ತುಂಬಿದರು.ದೇಶವನ್ನು ಟೀಂ ಇಂಡಿಯಾ ಎಂದು ಕರೆದ ಅವರು 125 ಕೋಟಿ ಜನತೆ ರಾಷ್ಟ್ರವನ್ನು ಹೊಸ ಎತ್ತರಕ್ಕೆ ಒಯ್ಯುತ್ತಾರೆ ಎಂದು  ವಿಶ್ವಾಸ ವ್ಯಕ್ತಪಡಿಸಿದರು. ಸಾರ್ವಜನಿಕ ಪಾಲ್ಗೊಳ್ಳುವಿಕೆ ಪ್ರಜಾಪ್ರಭುತ್ವದ ದೊಡ್ಡ ಆಸ್ತಿ ಎಂದು ಮೋದಿ ಹೇಳಿದರು. 
 
ಜನರಲ್ಲಿ ನಂಬಿಕೆಯ ವಾತಾರವಣ ಬೆಳೆಯುತ್ತಿದೆ. ಕಳೆದ ವರ್ಷ ನಾನು ಇಲ್ಲಿದ್ದಾಗ ನನ್ನ ಆಶಯಗಳನ್ನು, ಕನಸುಗಳನ್ನು ಮುಂದಿಟ್ಟಿದ್ದೆ. ಆದರೆ ಈಗ ಟೀಂ ಇಂಡಿಯಾದಲ್ಲಿ ಹೊಸ ಆತ್ಮವಿಶ್ವಾಸ ತುಂಬಿದೆ ಎಂದು ಹೇಳಲು ಬಯಸುತ್ತೇನೆ. ಒಂದು ವರ್ಷದಲ್ಲಿ ಟೀಂ ಇಂಡಿಯಾ ನವೀಕೃತ ವಿಶ್ವಾಸದೊಂದಿಗೆ ಎಲ್ಲಾ ಕನಸುಗಳನ್ನು ನೆರವೇರಿಸಲು ಬದ್ಧವಾಗಿದೆ ಎಂದರು. 
 

ವೆಬ್ದುನಿಯಾವನ್ನು ಓದಿ