ತೃಣಮೂಲ ಕಾಂಗ್ರೆಸ್ ಮತ್ತು ತೆಲುಗುದೇಶಂ ಪಕ್ಷದ ನಡುವೆ ಕೋಣೆಯನ್ನು ಆಕ್ರಮಿಸಿಕೊಳ್ಳುವ ನಡುವೆ ತಿಕ್ಕಾಟ ಆರಂಭವಾಗಿ ನಾಮಫಲಕಗಳನ್ನು ಪರಸ್ಪರರು ಗಾಳಿಗೆ ತೂರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಸಂಸತ್ತಿನಲ್ಲಿ ಲೋಕಸಭಾ ಸ್ಪೀಕರ್ ಮಧ್ಯಪ್ರವೇಶಿಸಿ ಕೋಣೆಯ ಬಿಕ್ಕಟ್ಟನ್ನು ಶಮನ ಮಾಡಿದರು.ಕಟ್ಟಡ ನೆವಮಹಡಿಯ ರೂಂ. ನಂ. 5ರಲ್ಲಿ ಯಾವ ಪಕ್ಷದ ಕಚೇರಿ ಇರಬೇಕು ಎಂಬ ಬಗ್ಗೆ ಎರಡೂ ಪಕ್ಷದ ಸದಸ್ಯರ ನಡುವೆ ಕಿತ್ತಾಟ ಆರಂಭವಾಗಿತ್ತು.
ಈ ಕೋಣೆ ತಮ್ಮ ಪಕ್ಷಕ್ಕೆ ಸೇರಿದ್ದು ಎಂದು ವಾದಿಸಿದ ತೃಣಮೂಲ ಸದಸ್ಯರಾದ ಸುದೀಪ್ ಬಂಡೋಪಾಧ್ಯಾಯ ಮತ್ತು ಸುಲ್ತಾನ್ ಅಹ್ಮದ್ ಆ ಕೋಣೆಯನ್ನು ಆಕ್ರಮಿಸಲು ಪ್ರಯತ್ನಿಸಿದರು.ಆಗ ಟಿಡಿಪಿ ಸದಸ್ಯರು ಅವರನ್ನು ತಡೆಯಲು ಪ್ರಯತ್ನಿಸಿದರು. ಟಿಡಿಪಿ ಸದಸ್ಯರಿಗೆ 1999ರಲ್ಲಿ ಸ್ಪೀಕರ್ ಬಾಲಯೋಗಿ ಅಲಾಟ್ ಮಾಡಿದ್ದರು. ಇದರಿಂದ ಟಿಡಿಪಿ ಸದಸ್ಯರು ಕಳೆದ 15 ವರ್ಷಗಳಿಂದ ಆ ಕೋಣೆಯನ್ನು ಬಳಸುತ್ತಿದ್ದರು.ನಾವು ಬಲಾತ್ಕಾರದಿಂದ ಆ ಕೋಣೆಯನ್ನು ಆಕ್ರಮಿಸುತ್ತಿಲ್ಲ.
ಲೋಕಸಭೆ ಕಾರ್ಯಾಲಯ ನಮಗೆ ರೂಂ. ಅಲಾಟ್ ಮಾಡಿದೆ ಎಂದು ಬಂಡೋಪಾಧ್ಯಾಯ ತಿಳಿಸಿದರು. ಆದರೆ ಟಿಡಿಪಿ ತಮಗೆ ಈ ವರ್ಷದ ಜೂನ್ನಲ್ಲಿ ಪುನಃ ಅಲಾಟ್ ಮಾಡಲಾಗಿದೆ ಎಂದು ತಿಳಿಸಿದೆ. ಇತ್ತೀಚಿನ ಮಂಜೂರಾತಿ ಸುತ್ತಿನಲ್ಲಿ, ಟಿಡಿಪಿಗೆ 135 ಮತ್ತು 136ನೇ ನಂಬರ್ ಕೋಣೆ ನೀಡಲಾಗಿದ್ದರೂ ಎಡಪಕ್ಷಗಳು ಅವುಗಳನ್ನು ತೆರವು ಮಾಡಲು ತಯಾರಾಗಿಲ್ಲ.