ಟಿಪ್ಪು ಸುಲ್ತಾನ ಜನ್ಮದಿನಾಚರಣೆ ನಿಲ್ಲದು: ಸಿಎಂ ಸಿದ್ದರಾಮಯ್ಯ

ಶನಿವಾರ, 5 ಮಾರ್ಚ್ 2016 (16:08 IST)
ಕಳೆದ ವರ್ಷ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ ಸಂದರ್ಭದಲ್ಲಿ ನಡೆದ ಕೋಮುಗಲಭೆಯ ಹೊರತಾಗಿಯೂ ವಿವಾದಾತ್ಮಕ ಸುಲ್ತಾನ ಟಿಪ್ಪು ಜನ್ಮದಿನಾಚರಣೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಮುಂದುವರೆಸಲಾಗುವುದು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 
 
ಕಳೆದ ವರ್ಷ ಟಿಪ್ಪು ಜನ್ಮದಿನಾಚರಣೆ ಸಂದರ್ಭದಲ್ಲಿ ರಾಜ್ಯದ ಹಲವೆಡೆಗಳಲ್ಲಿ ನಡೆದ ಸಂಘರ್ಷದಲ್ಲಿ ಮೂವರು ದುರ್ಮರಣವನ್ನಪ್ಪಿದ್ದರು. ಟಿಪ್ಪು ಸುಲ್ತಾನ್ ಮತಾಂಧ ಎಂದು ಪ್ರತಿಪಾದಿಸುವ ಬಿಜೆಪಿ ಜನ್ಮದಿನಾಚರಣೆಯನ್ನು ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಿತ್ತು.  ಕೋಮು ಗಲಭೆ ನಡೆದ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ ಜನ್ಮದಿನಾಚರಣೆಯನ್ನು ನಿಲ್ಲಿಸಬೇಕು ಎಂಬ ಒತ್ತಾಯಗಳು ಕೇಳಿ ಬಂದಿದ್ದವು. 
 
ಆದರೆ ಸಿದ್ದರಾಮಯ್ಯ ಈ ಒತ್ತಡಗಳಿಗೆ ತಲೆಬಾಗಿಲ್ಲ. ನಿಮಗೆ ಇತಿಹಾಸದ ಬಗ್ಗೆ ಗೊತ್ತಿದೆ. ನೀವು ಟಿಪ್ಪು ವಿರುದ್ದ ಪಕ್ಷಪಾತ ಧೋರಣೆಯನ್ನು ಹೊಂದಿದ್ದಿರಿ. ಬ್ರಿಟಿಷರ ವಿರುದ್ಧ ಹೊರಾಡುತ್ತ ಆತ ಪ್ರಾಣ ಬಲಿದಾನ ಮಾಡಿದ. ಇತಿಹಾಸವನ್ನು ತಿರುಚಲು ಪ್ರಯತ್ನಿಸದಿರಿ ಎಂದು ಸಿಎಂ ಬಿಜೆಪಿಗೆ ಖಡಕ್ ಆಗಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ