ಅಲ್ಪಸಂಖ್ಯಾತರನ್ನು ಓಲೈಸಲು ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವ ಬಗ್ಗೆ ಖಾರವಾಗಿ ಟೀಕಿಸಿರುವ ಪಾಂಚಜನ್ಯ, ಟಿಪ್ಪು ಸುಲ್ತಾನ್ ದಕ್ಷಿಣದ ಔರಂಗಜೇಬ್ನಂತೆ ಲಕ್ಷಾಂತರ ಹಿಂದೂಗಳನ್ನು ಒತ್ತಾಯಪೂರ್ವಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ್ದನು. ಟಿಪ್ಪು ಜಯಂತಿ ಆಚರಿಸುತ್ತಿರುವ ಸಿದ್ದರಾಮಯ್ಯ ಕರ್ನಾಟಕದ ಲಾಲುನಂತೆ ಎಂದು ವರ್ಣಿಸಿದೆ.
ರಾಜ್ಯ ಸರಕಾರ ಮುಸ್ಲಿಂ ಸಮುದಾಯದವರಾದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಮತ್ತು ಮೈಸೂರು ಪ್ರಾಂತ್ಯದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಜಯಂತಿಗಳನ್ನು ಆಚರಿಸುವುದು ಬಿಟ್ಟು, ಟಿಪ್ಪು ಸುಲ್ತಾನ್ನಂತಹ ಧರ್ಮಾಂಧನ ಜಯಂತಿ ಆಚರಣೆಗೆ ಮುಂದಾಗಿದೆ ಎಂದು ಆರೆಸ್ಸೆಸ್ ಮುಖವಾಣಿಯಾದ ಆರ್ಗನೈಸರ್ ಕಿಡಿಕಾರಿದೆ.
ಹಿಂದುಸಂಘಟನೆಗಳ ಪ್ರಕಾರ, ಟಿಪ್ಪು ಜಾತ್ಯಾತೀತವಾದಿಯಲ್ಲ. ಭಾರಿ ಸಂಖ್ಯೆಯಲ್ಲಿ ದೇವಾಲಯಗಳನ್ನು ನೆಲಸಮಗೊಳಿಸಿ ಹಿಂದೂಗಳನ್ನು ಒತ್ತಾಯಪೂರ್ವಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ ಆತನೊಬ್ಬ ದಕ್ಷಿಣ ಭಾರತದ ಔರಂಗಜೇಬ್ನಂತೆ ಎಂದು ಆರೆಸ್ಸೆಸ್ ಮುಖವಾಣಿ ಪಾಂಚಜನ್ಯ ಲೇಖನದಲ್ಲಿ ಪ್ರಕಟಿಸಲಾಗಿದೆ.