ಪಾಕಿಸ್ತಾನದ ಪರ ಭಾರತದ ನೀತಿಗಳು ಸಂಪೂರ್ಣವಾಗಿ ವಿಫಲವಾಗಿವೆ. ಗುರುದಾಸ್ಪುರ್ ಉಗ್ರರ ದಾಳಿಯ ನಂತರವಾದರೂ ಸೀರೆ, ಶಾಲ್ ರಾಯಭಾರಿತ್ವಕ್ಕೆ ಅಂತ್ಯಹಾಡಿ ಇಂದಿರಾಗಾಂಧಿಯವರಂತೆ ಉಕ್ಕಿನ ಮನುಷ್ಯರಾಗಿ ಎಂದು ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಸಲಹೆ ನೀಡಿದ್ದಾರೆ.
ಪಂಜಾಬ್ನ ಗುರುದಾಸ್ಪುರ್ ಜಿಲ್ಲೆಯ ದೀನಾನಗರ್ ಪಟ್ಟಣದಲ್ಲಿ ನಡೆದ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ ಅವರು, ಪಾಕಿಸ್ತಾನದ ಪರ ಭಾರತದ ನೀತಿಗಳು ಸಂಪೂರ್ಣವಾಗಿ ವಿಫಲವಾಗಿವೆ. ಮುಂಬೈ ದಾಳಿ ಉಗ್ರರನ್ನು ಶಿಕ್ಷಿಸುವಲ್ಲಿ ಭಾರತ ವಿಫಲವಾಗಿದ್ದರಿಂದ ಮತ್ತಷ್ಟು ಉಗ್ರರ ದಾಳಿಗಳು ನಡೆಯುತ್ತಿವೆ ಎಂದು ಗುಡುಗಿದ್ದಾರೆ.
ಬಿಜೆಪಿ ಅಧಿಕಾರವಧಿಯಲ್ಲಿ ಭೂಗತ ದೊರೆ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಕರೆ ತಂದು ಶಿಕ್ಷಿಸುತ್ತದೆ ಎನ್ನುವ ವಿಶ್ವಾಸವಿತ್ತು. ಆದರೆ, ದಾವುದ್ನನ್ನು ಭಾರತಕ್ಕೆ ಕರೆತರಲು ಸಾಧ್ಯವಾಗಿಲ್ಲ. ಬದಲಿಗೆ ಪಾಕ್ ಉಗ್ರವಾದವನ್ನು ಹರಡಲು ಉಗ್ರರನ್ನು ಭಾರತಕ್ಕೆ ಕಳುಹಿಸುತ್ತದೆ ಎಂದು ಲೇವಡಿ ಮಾಡಿದರು.