ಉದ್ಧವ್ ಠಾಕ್ರೆ ಅವರಪ್ಪನಂತೆ ಉದಾರ ಸರ್ವಾಧಿಕಾರಿಯಂತೆ!

ಗುರುವಾರ, 25 ಜೂನ್ 2015 (12:46 IST)
ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ತನ್ನ ತಂದೆಯಿಂದ "ಉದಾರ ಸರ್ವಾಧಿಕಾರಿತ್ವ" ಗುಣವನ್ನು ಬಳುವಳಿಯಾಗಿ ಪಡೆದಿದ್ದಾರೆ ಎಂದು ಲೋಕಸಭೆಯ ಮಾಜಿ ಸ್ಪೀಕರ್ ಮನೋಹರ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
"ಹೌದು, ಖಂಡಿತವಾಗಿ ಇದು ಉದಾರ ಸರ್ವಾಧಿಕಾರಿಯ ಶೈಲಿಯಾಗಿದೆ.  ಹಿಂದೆ ಅದು ಬಾಳಾಸಾಹೇಬ್ ಅವರ ಶೈಲಿಯಾಗಿತ್ತು. ಉದ್ಧವ್‌ಜೀ ಸಹ ಅದೇ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ," ಎಂದು ಶಿವಸೇನೆಯ ಹಿರಿಯ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
 
ಕಳೆದ ಕೆಲ ವರ್ಷಗಳಿಂದ ಪಕ್ಷದಲ್ಲಿ ನಿಮ್ಮನ್ನು ಮೂಲೆಗುಂಪು ಮಾಡಲಾಗುತ್ತದೆ ಎಂದು ಕೇಳಲಾದ ಪ್ರಶ್ನೆಗೆ, "ಆ ರೀತಿ ಏನೂ ಅಲ್ಲ. ನಾನು ಪಕ್ಷದಲ್ಲಿ ಕ್ರಿಯಾಶೀಲನಾಗಿದ್ದೇನೆ. ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ", ಎಂದು ಅವರು ಉತ್ತರಿಸಿದರು.  
 
1966ರಲ್ಲಿ ಬಾಳಾಸಾಹೇಬ್ ಠಾಕ್ರೆ ಹುಟ್ಟು ಹಾಕಿದ ಪಕ್ಷದಲ್ಲಿನ ಕಾರ್ಯವೈಖರಿಯಲ್ಲಿ ಆಗಿರುವ ಮಹತ್ವದ ಬದಲಾವಣೆ ಏನು ಕೇಳಲಾಗಿ, "ಪಕ್ಷದ ಮುಖ್ಯ ನಾಯಕರು ಬದಲಾಗಿದ್ದಾರಷ್ಟೇ. ಆಗ ಬಾಳಾಸಾಹೇಬ್ ಪಕ್ಷದ ನೇತೃತ್ವ ವಹಿಸಿದ್ದರು. ಈಗ ಅವರ ಮಗ ಉದ್ಧವ ಅದನ್ನು ನಿರ್ವಹಿಸುತ್ತಿದ್ದಾರೆ", ಎಂದವರು ಹೇಳಿದರು. 
 
ಉದ್ಧವ್ ಅವರ ನಾಯಕತ್ವದ ಶೈಲಿ ಬಗ್ಗೆ ಕೇಳಲಾಗಿ, "ತನಗೆದುರಾದ ಯಾವ ಪ್ರಶ್ನೆಗೆ ಬೇಕಾದರೂ  ಉತ್ತರಿಸಲು ಅವರು ಸಮರ್ಥರು. ಅವರು ಪತ್ರಿಕಾಗೋಷ್ಠಿ ನಡೆಸುವ ಮತ್ತು ವಿಐಪಿಗಳ ಜತೆ ಮಾತನಾಡುವ ರೀತಿಯನ್ನು ನಾನು ಕಂಡಿದ್ದೇನೆ. ಅವರು ಮುಕ್ತ ಮನಸ್ಸಿನವರು", ಎಂದು ಜೋಶಿ ತಮ್ಮ ಪಕ್ಷದ ನಾಯಕನನ್ನು ಹೊಗಳಿದ್ದಾರೆ. 

ವೆಬ್ದುನಿಯಾವನ್ನು ಓದಿ