ಮುಖ್ಯಮಂತ್ರಿಯಾಗಬೇಕೆನ್ನುವ ತನ್ನ ಬಯಕೆಯನ್ನು ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಪ್ರಕಟಿಸಿರುವ ಶಿವಸೇನಾ ನಾಯಕ ಉದ್ಧವ್ ಠಾಕ್ರೆ, ತನಗೊಂದು ಅವಕಾಶ ನೀಡುವಂತೆ ಮತದಾರರಿಗೆ ಮನವಿ ಮಾಡಿದ್ದಾರಲ್ಲದೆ, ತಮಗೆ ಮತ ನೀಡಿದ್ದಕ್ಕಾಗಿ ಮುಂದೆ ಅವರು ಪಶ್ಚಾತ್ತಾಪ ಪಡಬೇಕಾದ ಸನ್ನಿವೇಶ ಸೃಷ್ಟಿಯಾಗುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.
ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮಿತ್ರ ಪಕ್ಷ ಬಿಜೆಪಿಯೊಂದಿಗೆ ಅಸಮಾಧಾನಗೊಂಡಿರುವ ಠಾಕ್ರೆ, ತಮ್ಮ ರಾಜ್ಯದಲ್ಲಿ ಬಿಜೆಪಿ ಮುಂದೆ ಶಿವಸೇನೆಯೇ ಪ್ರಾಬಲ್ಯ ಹೊಂದಿದೆ ಎಂದು ಹೇಳಿಕೊಂಡರಲ್ಲದೇ, ಕೇಸರಿ ಮೈತ್ರಿಕೂಟ ಅಧಿಕಾರಕ್ಕೇರಿದಲ್ಲಿ ಶಿವಸೇನೆಯ 'ಮುಖ'ವೇ ಮುಖ್ಯಮಂತ್ರಿ ಸ್ಥಾನವನ್ನಲಂಕರಿಸಲಿದೆ ಎಂದು ಘೋಷಿಸಿದ್ದಾರೆ.