ಮೂರು ವರ್ಷದೊಳಗೆ ಗಂಗಾಶುದ್ಧಿ ಸಂಪನ್ನ: ಉಮಾಭಾರತಿ

ಸೋಮವಾರ, 15 ಸೆಪ್ಟಂಬರ್ 2014 (15:51 IST)
ಭಾರತದ ಪವಿತ್ರನದಿ ಗಂಗಾನದಿ ಶುದ್ಧಿ ಕುರಿತು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿರುವ  ಸಚಿವೆ ಉಮಾಭಾರತಿ  ಮೂರು ವರ್ಷದೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಜತೆಗೆ ಕಾರ್ಯಸಾಧನೆಯಾಗುವ ಮೊದಲು ಈ ಕುರಿತ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಲು ನಾನು ಬಯಸಲಾರೆ ಎಂದು ತಿಳಿಸಿದ್ದಾರೆ. 


ಗಂಗಾನದಿ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ  ನನಗೆ ಪದೇ ಪದೇ ಪ್ರಶ್ನೆ ಕೇಳಲಾಗುತ್ತಿದೆ.ಆದರೆ ಈ ಕುರಿತು ನಾನೇನು ಮಾತನಾಡುವುದಿಲ್ಲ. ನಾನು ಕೆಲಸ ಕಾರ್ಯಗತಗೊಳಿಸುವುದರಲ್ಲಿ ನಂಬಿಕೆ ಇಡುತ್ತೇನೆ. ಮೂರು ವರ್ಷಗಳೊಳಗೆ ಗಂಗೆಯನ್ನು ಯಾವುದೇ ಅಡೆತಡೆ ಇಲ್ಲದೆ ಹರಿಯುವಂತೆ ಮಾಡುವುದು ಮತ್ತು ನಿರ್ಮಲಗೊಳಿಸುವುದು ನನ್ನ ಗುರಿ ಎಂದು ಅವರು ಹೇಳಿದ್ದಾರೆ. 
 
ಸಾರ್ವಜನಿಕ ಶಾಲೆಗಳ ಸಹಯೋಗ ಸಮಿತಿ  (CCPS)  ಆಯೋಜಿಸಿದ್ದ, ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಯಾವುದೇ ಪ್ರಶ್ನೆಗಳು ನನ್ನ ಮೇಲೆ ಪರಿಣಾಮ ಉಂಟುಮಾಡಲಾರದು ಎಂದರು. 
 
ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಖಾತೆ ಸಚಿವೆಯಾಗಿರುವ ಅವರು ವಿದ್ಯಾರ್ಥಿಗಳ ಬದುಕನ್ನು ರೂಪಿಸುವುದರಲ್ಲಿ ಶಿಕ್ಷಕರ ಪಾತ್ರವನ್ನು ಒತ್ತಿ ಹೇಳಿದರಲ್ಲದೇ ತಮ್ಮ ಯಶಸ್ಸನ್ನು  ತಮಗೆ ಪಾಠ ಹೇಳಿದ ಅಧ್ಯಾಪಕರಿಗೆ ಅರ್ಪಿಸಿದರು.  
 
ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಎಲ್ಲ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ ಅವರು ನೀವೆಲ್ಲರೂ ನಿಜವಾದ ಗುರುಗಳಾಗಿ ಎಂದು ಕರೆಕೊಟ್ಟರಲ್ಲದೇ, ವೃತ್ತಿಪರವಾಗಿ ಬೆಳೆಯುವುದರ ಮೊದಲು ಉತ್ತಮ ನಾಗರಿಕರಾಗಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ವೆಬ್ದುನಿಯಾವನ್ನು ಓದಿ