ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಆಯವ್ಯಯವೂ ಕೂಡ ರೈಲ್ವೇ ಬಜೆಟ್ ನಂತೆಯೇ ಇದ್ದು, ಕೇವಲ ವಿಷನ್ ದಾಕ್ಯುಮೆಂಟ್ ಆಗಿದೆಯೇ ಹೊರತು ಮತ್ತೇನೂ ಅಲ್ಲ ಎಂದರು. ಈ ಬಜೆಟ್ ಕೇವಲ ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಉದ್ಯಮಗಳಿಗೆ ಮಾತ್ರ ಸೀಮಿತವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಅವರಿ(ಬಿಜೆಪಿ)ಗೆ ಯಾರು ಬೆಂಬಲವಾಗಿ ನಿಂತಿದ್ದರೋ ಅವರಿಗೆ ಮಾತ್ರ ಸೀಂಮಿತವಾಗಿದೆ. ಇದು ರೈತರ ಪರವಾದ ಆಯವ್ಯಯ ಅಲ್ಲವೇ ಅಲ್ಲ ಎಂದರು.
ಸಾಮಾಜಿಕ ವಲಯದಲ್ಲಿ ಅತ್ಯುನ್ನತ ಮಟ್ಟದಲ್ಲಿ ಹೂಡಿಕೆ ಮಾಡಿಸುವಲ್ಲಿಯೂ ಕೂಡ ಕೊರತೆಯನ್ನು ಅನುಭವಿಸಲಿದೆ. ಕಚ್ಚಾ ತೈಲದಲ್ಲಿ ಬೆಲೆ ಇಳಿಮುಖವಾದ ಹಿನ್ನೆಲೆಯಲ್ಲಿ ಸರ್ಕಾರ ಸಾಕಷ್ಟು ಹಣವನ್ನು ಗಳಿಸಿದೆ. ಆದರೆ ಆ ಹಣವನ್ನು ಸರ್ಕಾರ ಬಡವರ ಸರ್ವತೋಮುಖ ಅಭಿವೃದ್ಧಿಗಾಗಿ ಬಳಸಲಿಲ್ಲ. ಈ ಆಯವ್ಯಯದ ಪರಿಣಾಮ ಏನೆಂದು ಮುಂದೆ ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆ ಬಳಿಕ ತಿಳಿಯಲಿದೆ ಎಂದ ಅವರು, ಬಜೆಟ್ನಲ್ಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಅಲ್ಲದೆ ಹಳೆ ಯೋಜನೆಗಳಿಗೆ ನೂತನವಾಗಿ ನಾಮಕರಣ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಆರಂಭದಲ್ಲಿ ಕೇವಲ 100 ದಿನಗಳ ಒಳಗೆ ನಾವು ಕಪ್ಪು ಹಣವನ್ನು ವಾಪಾಸ್ ತರಲಿದ್ದೇವೆ ಎಂದು ಹೇಳುತ್ತಿತ್ತು. ಆದರೆ ಅಧಿಕಾರ ವಹಿಸಿಕೊಂಡು 9 ತಿಂಗಳ ಬಳಿಕ ಒಂದು ಮಸೂದೆಯನ್ನಷ್ಟೇ ತಂದಿದ್ದಾರೆ. ಸುಮ್ಮನೆ ಬಡ ಬಡಾಯಿಸುತ್ತಿರುವ ಬಿಜೆಪಿಯವರಿಂದ ಕಪ್ಪು ಹಣ ವಾಪಾಸ್ ತರಲು ಸಾಧ್ಯವಿಲ್ಲ ಎಂದರು. ಕಪ್ಪು ಹಣವನ್ನು ತರುವುದಕ್ಕೆ ಸಂಬಂಧಿಸಿದಂತೆ ಹಿಂದಿನ ಸರ್ಕಾರವೇ ಎಲ್ಲಾ ಕ್ರಮಗಳನ್ನು ಕೈಗೊಂಡಿತ್ತು. ಆದರೆ ಇವರು(ಬಿಜೆಪಿ) ಎಲ್ಲಾ ನಮ್ಮದೇ ಎಂದು ಕೇವಲ ತುತ್ತೂರಿ ಊದುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದರು.