ಕೇಂದ್ರ ಸಚಿವರ ಮನೆಯ ಕೆಲಸದಾಕೆಯ ಹತ್ಯೆ

ಮಂಗಳವಾರ, 30 ಜೂನ್ 2015 (12:00 IST)
ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಗೋವಾ ನಿವಾಸದಲ್ಲಿ ಕೆಲಸಕ್ಕಿದ್ದ ಕರ್ನಾಟಕ ಮೂಲದ ಮಹಿಳೆಯನ್ನು ಆಕೆಯ ಸ್ನೇಹಿತನೇ ಕೊಲೆಗೈದಿರುವ ಘಟನೆ ನಡೆದಿದೆ. 
ಬಾಗಲಕೋಟೆಯ ಚಾರು ರಾಥೋಡ್ ಮೃತ ಮಹಿಳೆಯಾಗಿದ್ದು ಸಾವೋ ಪೆಡ್ರೋದಲ್ಲಿರುವ ಸ್ವಗೃಹದಲ್ಲಿ ರವಿವಾರ ಆಕೆ ಶವವಾಗಿ ಪತ್ತೆಯಾಗಿದ್ದಾಳೆ. 
 
ಚಾರು ಪಾಂಡುರಂಗ ರಾಥೋಡ್(40) ಕಳೆದ ಇಪ್ಪತ್ತು ವರ್ಷದಿಂದ ಗೋವಾದಲ್ಲಿ ನೆಲೆಯೂರಿದ್ದು 8 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದಾಳೆ. ಆಕೆಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಪುತ್ರಿ ಇದ್ದಾರೆ. ಕಳೆದ ಕೆಲ ವರ್ಷಗಳಿಂದ ಸಚಿವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಅವರ ಜತೆಗೆ ವಾಸವಾಗಿದ್ದ ಕುಟುಂಬ ಸ್ನೇಹಿತನೇ  ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. 
 
ಭಾನುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಆಕೆಯನ್ನು ಕತ್ತು ಹಿಸುಕಿ ಕೊಲೆಗೈದು ಆಕೆಯ ಮೈಮೇಲಿದ್ದ ಬಂಗಾರದ ಒಡವೆಗಳನ್ನು ಮತ್ತು ಮೊಬೈಲ್ ಫೋನ್‌ನ್ನು ಕದ್ದೊಯ್ದಿದ್ದಾರೆ ಎಂದು ಆಕೆಯ ಮಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಮೃತಳ ನಿವಾಸ ಸಚಿವರ ಮನೆಯಿಂದ ಕೂಗಳತೆ ದೂರದಲ್ಲಿದೆ. 
 
'ತಮ್ಮ ಕೌಟುಂಬಿಕ ಸ್ನೇಹಿತನೇ ಈ ಕೊಲೆಯ ಹಿಂದಿದ್ದಾನೆ. ಶನಿವಾರ ರಾತ್ರಿ ತನ್ನ ತಾಯಿಗೂ ಮತ್ತು ಆರೋಪಿಗೂ ಜಗಳವಾಗಿತ್ತು. ನಂತರ ಕುಡಿದುಕೊಂಡು ಬಂದಿದ್ದ ಆತನನ್ನು ಅಮ್ಮ ಮನೆ ಒಳಗೆ ಬರಲು ಬಿಟ್ಟಿರಲಿಲ್ಲ. ಕೋಪಗೊಂಡಿದ್ದ ಆತ ಬೆದರಿಕೆ ಒಡ್ಡಿ ಅಲ್ಲಿಂದ ತೆರಳಿದ್ದ', ಎಂದು ಮೃತಳ ಪುತ್ರ ತನ್ನ ದೂರಿನಲ್ಲಿ ತಿಳಿಸಿದ್ದಾನೆ. 
 
ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಉಸಿರುಗಟ್ಟಿಸಿ ಕೊಂದಿರುವುದು ಸ್ಪಷ್ಟವಾಗಿದೆ.
 
ಆರೋಪಿಗಾಗಿ ಪೊಲೀಸರು ಬಲೆಬೀಸಿದ್ದಾರೆ.

ವೆಬ್ದುನಿಯಾವನ್ನು ಓದಿ