ಭಾರತದ ಹೆಮ್ಮೆಯ ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಯವರಿಗೆ ಇಂದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರಧಾನ ಮಾಡಲಾಗುವುದು. ಅಟಲ್ ಅನಾರೋಗ್ಯ ಪೀಡಿತರಾಗಿರುವುದರಿಂದ ಅವರ ನಿವಾಸಕ್ಕೆ ತೆರಳಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪ್ರಶಸ್ತಿ ನೀಡಲಿದ್ದಾರೆ.
ವಾಜಪೇಯಿವರಿಗೆ ಪ್ರಶಸ್ತಿ ನೀಡಲು ಸ್ವತಃ ರಾಷ್ಟ್ರಪತಿ ಮನೆಗೆ ಬರುತ್ತಿದ್ದಾರೆ ಎಂಬುದನ್ನು ಅವರಿಗೆ ತಿಳಿಸಲು ಬಿಜೆಪಿಯ ಹಿರಿಯ ನಾಯಕರೊಬ್ಬರು ಅವರ ಮನೆಗೆ ಹೋಗಿದ್ದರಂತೆ. ಅವರ ಮಾತುಗಳನ್ನು ಕೇಳಿದ ವಾಜಪೇಯಿ ನಗಲು ಇಲ್ಲವಂತೆ. ಹಾಸಿಗೆಯಲ್ಲಿ ಮಲಗಿದ್ದ ಅವರು ತಮ್ಮನ್ನು ಭೇಟಿಯಾಗಲು ಬಂದ ಆ ವ್ಯಕ್ತಿಯನ್ನು ತದೇಕ ಚಿತ್ತದಿಂದ ಬಹಳ ಹೊತ್ತು ನೋಡಿ ಸುಮ್ಮನಾದರಂತೆ. ಹೀಗೆಂದು ರಾಷ್ಟ್ರೀಯ ದಿನಪತ್ರಿಕೆಯೊಂದರಲ್ಲಿ ಸುದ್ದಿ ಪ್ರಕಟವಾಗಿದೆ.
ಇಂದು ಸಂಜೆ 5 ಗಂಟೆಗೆ ಅಟಲ್ ನಿವಾಸದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಸಚಿವರಾದ ರಾಜನಾಥ್ ಸಿಂಗ್ ಸೇರಿದಂತೆ ಕೇಂದ್ರ ಸರಕಾರದ ಎಲ್ಲ ಸಚಿವರು, ಇತರ ಬಿಜೆಪಿ ನಾಯಕರು, ಗಣ್ಯ ವ್ಯಕ್ತಿಗಳು ಈ ಶುಭ ಸಂದರ್ಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.