ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ: ಪ್ರಧಾನಿ ಮೋದಿ ಮೌನ ಮುರಿಯಲಿ ಎಂದ ವಿಎಚ್ಪಿ
ಬುಧವಾರ, 10 ಫೆಬ್ರವರಿ 2016 (19:12 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನ ಮುರಿದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಿಸಲು ತಮ್ಮ ಸರಕಾರ ಬದ್ಧವಾಗಿದೆ ಎನ್ನುವ ಸ್ಪಷ್ಟ ಸಂದೇಶ ರವಾನಿಸಲಿ ಎಂದು ವಿಶ್ವ ಹಿಂದು ಪರಿಷತ್ ಒತ್ತಾಯಿಸಿದೆ.
ಪ್ರಧಾನಿ ಮೋದಿ ರಾಮಜನ್ಮಭೂಮಿಯಲ್ಲಿ ಸೆಲ್ಫಿ ತೆಗೆದುಕೊಂಡು ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ರಾಮಮಂದಿರ ನಿರ್ಮಾಣಕ್ಕೆ ಬದ್ಧವಾಗಿದೆ ವಎನ್ನುವ ಸಂದೇಶ ಸಾರಲಿ ಎಂದು ವಿಶ್ವ ಹಿಂದು ಪರಿಷತ್ನ ಕೇಂದ್ರೀಯ ಮಾರ್ಗದರ್ಶಕ ಮಂಡಲ್ ಕೋರಿದೆ.
ದೇಶಾದ್ಯಂತ ಗೋ ಹತ್ಯೆಯಂತಹ ಘಟನೆಗಳಲ್ಲಿ ಹೆಚ್ಚಳವಾಗುತ್ತಿರುವುದು ಕಳವಳಕಾರಿಯಾಗಿದೆ. ಬಿಜೆಪಿ ಅಧಿಕಾರವಿರುವ ರಾಜ್ಯಗಳಾದ ಗುಜರಾತ್ ಮತ್ತು ಹರಿಯಾಣಾ ರಾಜ್ಯಗಳಲ್ಲಿರುವಂತೆ ಗುರು ಸೇವಾ ಆಯೋಗ ರಚಿಸಬೇಕು ಎಂದು ವಿಎಚ್ಪಿ ಮುಖಂಡರು ಮತ್ತು ಹಿಂದೂ ಧಾರ್ಮಿಕ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಹಿಂದು ಸಮುದಾಯದ ಬೆಂಬಲ ಪಡೆದಿರುವ ಪ್ರಧಾನಿ ಮೋದಿ ಅಯೋಧ್ಯೆ ವಿಷಯದ ಬಗ್ಗೆ ಮೌನ ಮುರಿದು ಹೇಳಿಕೆ ನೀಡುವುದು ಅಗತ್ಯವಾಗಿದೆ ಎಂದು ವಿಎಚ್ಪಿ ಮುಖಂಡ ರಾಮ್ ವಿಲಾಸ್ ವೇದಾಂತಿ ಹೇಳಿದ್ದಾರೆ.
ವಿದೇಶಗಳಿಗೆ ಭೇಟಿ ನೀಡಿದ ಮೋದಿ ಹಲವು ಧರ್ಮಗಳಿಗೆ ಸೇರಿದ ಪವಿತ್ರ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಅದರಂತೆ, ಅಯೋಧ್ಯೆಯಲ್ಲೂ ಮೋದಿ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.