ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯಿಂದ ಶೆಹನ್‌ಶಾ ವರ್ತನೆ: ಪ್ರಧಾನಿ ಮೋದಿ ಆರೋಪ

ಸೋಮವಾರ, 28 ಮಾರ್ಚ್ 2016 (13:30 IST)
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶೆಹನ್‌ಶಾರಿದ್ದಂತೆ ಎಂದು ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಹಲವು ಕುಟುಕು ಕಾರ್ಯಾಚರಣೆಗಳಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರು ಹಣ ಪಡೆದಿರುವ ಕೃತ್ಯಗಳು ಬಹಿರಂಗವಾಗಿವೆ. ಕಾಂಗ್ರೆಸ್-ಎಡಪಕ್ಷಗಳ ಮೈತ್ರಿ ಬಂಗಾಳದ ಗೌರವ ಮತ್ತು ಅಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಟೀಕಿಸಿದ್ದಾರೆ.
 
ಕಳೆದ 34 ವರ್ಷಗಳ ಎಡಪಕ್ಷಗಳ ಅಡಳಿತ ಮತ್ತು ಐದು ವರ್ಷಗಳ ಮಮತಾ ಬ್ಯಾನರ್ಜಿ ಅಡಳಿತದಿಂದ ರಾಜ್ಯ ಹದಗೆಟ್ಟುಹೋಗಿದೆ. ಜನತೆ ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಗೆ ಮತ ನೀಡಬೇಕು ಎಂದು ಕರೆ ನೀಡಿದರು. 
 
ನನ್ನ ಬಳಿ ಮೂರು ಗುರಿಗಳಿವೆ. ಅಭಿವೃದ್ಧಿ, ವೇಗದ ಅಭಿವೃದ್ಧಿ ಮತ್ತು ಸಮಗ್ರ ಅಭಿವೃದ್ಧಿ ಎಂದು ಪ್ರಧಾನಿ ಮೋದಿ ಮತದಾರರನ್ನು ಓಲೈಸುವ ಪ್ರಯತ್ನ ಮಾಡಿದರು.
 
ಕಳೆದ ಐದು ವರ್ಷಗಳ ಹಿಂದೆ ಎಡಪಕ್ಷಗಳ ಸರಕಾರವನ್ನು ಕಿತ್ತುಹಾಕಿ ಅಧಿಕಾರಕ್ಕೆ ಬಂದ ತೃಣಮೂಲ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಯಾವುದೇ ಬದಲಾವಣೆ ತರುವಲ್ಲಿ ವಿಫಲವಾಗಿದೆ. ಸಿಎಂ ಬ್ಯಾನರ್ಜಿ ಕಾರ್ಯವೈಖರಿ ಜನಪರವಾಗಿಲ್ಲ ಎಂದು ಆರೋಪಿಸಿದರು.
 
ಮಮತಾ ಬ್ಯಾನರ್ಜಿ ವಿಪಕ್ಷದಲ್ಲಿದ್ದಾಗ ನ್ಯಾಯಕ್ಕಾಗಿ ಬೀದಿ ಬೀದಿಗಳಲ್ಲಿ ಹೋರಾಟ ನಡೆಸುತ್ತಿದ್ದರು.ಆದರೆ, ಮುಖ್ಯಮಂತ್ರಿಯಾದ ನಂತರ ಯಾರನ್ನು ಲಕ್ಷಕ್ಕೆ ತೆಗೆದುಕೊಳ್ಳದೆ ಶೆಹನ್‌ಶಾ ರಂತೆ ವರ್ತಿಸುವುದು ಪ್ರಜಾಪ್ರಭುತ್ವದಲ್ಲಿ ಮಾರಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ