ಜಮ್ಮು ಕಾಶ್ಮೀರದಲ್ಲಿ ಹಿಂದುವೊಬ್ಬ ಸಿಎಂ ಯಾಕಾಗಬಾರದು: ಅಮಿತ್ ಶಾ

ಶುಕ್ರವಾರ, 22 ಆಗಸ್ಟ್ 2014 (18:10 IST)
ಇದೀಗ ಬಿಜೆಪಿ ದೃಷ್ಟಿ ಜಮ್ಮು-ಕಾಶ್ಮೀರದ ಮೇಲಿದೆ. ರಾಜ್ಯದಲ್ಲಿ ಹಿಂದು ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿಸಬೇಕು ಎನ್ನುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಯಕೆಯಿಂದಾಗಿ, ಬಿಜೆಪಿ ನಾಯಕರು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಗುರಿಯನ್ನು ಸಾಧಿಸಲು ರಾಜ್ಯದಲ್ಲಿ ಭೂಮಿಕೆಯನ್ನು ಸಿದ್ದಪಡಿಸುತ್ತಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ. 
 
" ನಾನು ಇತರ ರಾಜ್ಯಗಳ ಚುನಾವಣೆ ಬಗ್ಗೆ ಹೆಚ್ಚು ಚಿಂತಿತನಾಗಿಲ್ಲ. ಆಯಾ ರಾಜ್ಯಗಳಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಗೆಲುವನ್ನು ಸಾಧಿಸುತ್ತೇವೆ ಎನ್ನುವ ವಿಶ್ವಾಸವಿದೆ. ಆದರೆ, ನಾನು ಬಯಸುವುದೇನೆಂದರೆ ಪಕ್ಷದ ಕಾರ್ಯಕರ್ತರು ತಮ್ಮ ಹೆಚ್ಚಿನ ಗಮನ ಜಮ್ಮು ಕಾಶ್ಮೀರದ ಕಡೆಗೆ ಹರಿಸಬೇಕು. ಒಂದು ವೇಳೆ ನಾವು  ಬಿಜೆಪಿಯ ನಾಯಕರೊಬ್ಬರನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯನ್ನಾಗಿ ಮಾಡಿದರೆ, ಇಡೀ ವಿಶ್ವಕ್ಕೆ ಯಾವ ಸಂದೇಶ ಹೋಗುವುದೆಂದು ಯೋಚಿಸಿ" ಎಂದು ಪಕ್ಷದ ಸಭೆಯೊಂದರಲ್ಲಿ ಅಮಿತ್‌ ಶಾ ಹೇಳಿದ್ದಾರೆ. 
 
ಕಳೆದ ಲೋಕಸಭೆ ಚುನಾವಣೆಯಲ್ಲಿ ಜಮ್ಮು ಪ್ರದೇಶದ 37 ವಿಧಾನಸಭೆ ಕ್ಷೇತ್ರಗಳಲ್ಲಿ 30 ರಲ್ಲಿ ಮತ್ತು ಲಡಾಖ್‌ನ 4 ವಿಧಾನಸಭೆ ಕ್ಷೇತ್ರಗಳಲ್ಲಿನ 3 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು ಈ ಎರಡೂ ಕ್ಷೇತ್ರಗಳ ಒಟ್ಟು 41 ಸೀಟುಗಳಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲುವ ಗುರಿಯನ್ನು ಶಾ ಹೊಂದಿದ್ದಾರೆ.
 
ಕಳೆದ 2008ರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ, ಜಮ್ಮುವಿನ 37 ಸೀಟುಗಳಲ್ಲಿ ಕೇವಲ 11 ಸೀಟುಗಳಲ್ಲಿ ಮಾತ್ರ ಗೆಲುವನ್ನು ಸಾಧಿಸಿತ್ತು. ಆದರೆ, ಕಾಶ್ಮೀರದ 46 ಮತ್ತು ಲಡಾಖ್‌‌ನ 4 ಸೀಟುಗಳಲ್ಲಿ ಒಂದು ಸೀಟು ಗೆಲ್ಲುವುದು ಸಾಧ್ಯವಾಗಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ದೊರೆತ ಅಪೂರ್ವ ಬೆಂಬಲ ಬಿಜೆಪಿ ಪಕ್ಷದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.  

ವೆಬ್ದುನಿಯಾವನ್ನು ಓದಿ