ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭ: ಸರಕಾರದ ತರಾಟೆಗೆ ವಿಪಕ್ಷಗಳು ಸಜ್ಜು

ಬುಧವಾರ, 25 ನವೆಂಬರ್ 2015 (14:16 IST)
ನಾಳೆಯಿಂದ ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಅಸ್ತ್ರಗಳ ಸಿದ್ದತೆಯಲ್ಲಿ ತೊಡಗಿವೆ. ಬಿಹಾರ್ ಚುನಾವಣೆ ಫಲಿತಾಂಶ, ಅಸಹಿಷ್ಣುತೆ ಸೇರಿದಂತೆ ಹಲವು ವಿಷಯಗಳಿಂದಾಗಿ ಸದನದಲ್ಲಿ ಕೋಲಾಹಲ ಉಂಟಾಗುವ ಸಾಧ್ಯತೆಗಳಿವೆ.
 
ಕೇಂದ್ರ ಸರಕಾರ ಅಧಿವೇಶನದಲ್ಲಿ ಜಿಎಸ್‌ಟಿ ಮಸೂದೆಯನ್ನು ಮಂಡಿಸಲು ನಿರ್ಧರಿಸಿದ್ದು, ವಿಪಕ್ಷಗಳು ಸಹಕಾರ ನೀಡಬೇಕು ಎಂದು ಕೋರಿದೆ.
 
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಚರ್ಚಿಸಲು ಎರಡು ದಿನಗಳ ಕಾಲ ವಿಶೇಷ ಸಭೆ ಕರೆಯಲಾಗಿದ್ದು, ತದನಂತರ ಸೋಮವಾರದಿಂದ ಸರಕಾರ ಮಸೂದೆ ಮಂಡಿಸಲು ನಿರ್ಧರಿಸಿದ್ದರಿಂದ ಸರಕಾರ ಮತ್ತು ವಿಪಕ್ಷಗಳ ಮಧ್ಯೆ ರಣರಂಗ ನಿರ್ಮಾಣವಾಗಲಿದೆ. 
 
ಕೇಂದ್ರ ಸರಕಾರ ಇಂದು ಸರ್ವ ಪಕ್ಷಗಳ ಸಮಿತಿಯ ಸಭೆ ಕರೆದಿದೆ. ಸಭೆಯ ನಂತರ ಬಿಜೆಪಿ ಸಂಸದೀಯ ಸಮಿತಿಯ ಸದಸ್ಯರು ಎನ್‌ಡಿಎ ಮೈತ್ರಿಕೂಟದ ಸದಸ್ಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಚಳಿಗಾಲದ ಅಧಿವೇಶನದಲ್ಲಿ ಅಸಹಿಷ್ಣುತೆ ಕುರಿತಂತೆ ಚರ್ಚೆ ನಡೆಸಲು ಅನುಮತಿ ಕೋರಿ ಕಾಂಗ್ರೆಸ್ ಈಗಾಗಲೇ ಸಭಾಪತಿಗೆ ಮನವಿ ಮಾಡಿದೆ. ಕಾಂಗ್ರೆಸ್, ಜೆಡಿಯು ಮತ್ತು ಸಿಪಿಐ-ಎಂ ಕೂಡಾ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ದವಾಗಿವೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ