ಸತಿಸಹಗಮನ: ಪತಿಯ ಚಿತೆಗೆ ಹಾರಿದಳಾ ಸತಿ?

ಗುರುವಾರ, 2 ಏಪ್ರಿಲ್ 2015 (09:26 IST)
50 ವರ್ಷದ ಮಹಿಳೆಯೊಬ್ಬಳ ಮೃತದೇಹ  ಆಕೆಯ ಪತಿಯ ಚಿತೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿರುವ ಕರಾಳ ಘಟನೆ ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆದಿದೆ. ಇದು ಭಾರತದಲ್ಲಿ ಸ್ವಾತಂತ್ರಪೂರ್ವದಲ್ಲಿಯೇ ನಿರ್ಬಂಧಿಸಲ್ಪಟ್ಟ ಸತಿ ಸಹಗಮನ ಪದ್ಧತಿ ಈಗಲೂ ಜೀವಂತವಾಗಿದೆ ಎಂಬ ಅನುಮಾನವನ್ನು ಹುಟ್ಟು ಹಾಕಿದೆ. 
 

ಜಿಲ್ಲೆಯ ಲೋಹತ್ತಾ ಗ್ರಾಮದ ನಿವಾಸಿ ತುಕಾರಾಮ್‌ ಮಾನೆ ಕಳೆದ ಭಾನುವಾರ ಹೃದಯಾಘಾತದಿಂದ ಮರಣ ಹೊಂದಿದ್ದರು.  ಸೋಮವಾರ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು. ಮೃತದೇಹವನ್ನು ಸುಟ್ಟ ಕೆಲವೇ ಗಂಟೆಗಳಲ್ಲಿ ಸೋಮವಾರ ಸಂಜೆಯಿಂದ ತುಕಾರಾಮ್ ಪತ್ನಿ ಉಷಾ ನಾಪತ್ತೆಯಾಗಿದ್ದರು. ಮಂಗಳವಾರ  ತುಕಾರಾಮ್‌ ಅವರ ಚಿತಾ ಭಸ್ಮವನ್ನು ಸಂಗ್ರಹಿಸಲೆಂದು ಸ್ಮಶಾನಕ್ಕೆ ಹೋದ ಕುಟುಂಬದವರಿಗೆ ತುಕಾರಾಮ್‌ ಚಿತೆಯಲ್ಲಿ ಸುಟ್ಟು ಕರಕಲಾಗಿದ್ದ  ಅವರ ಪತ್ನಿ ಉಷಾಳ ದೇಹವೂ ಕೂಡ ಕಂಡಿದೆ.
 
ಮರಾಠಾವಾಡ ವಿಭಾಗದ ಕಿಲ್ಲಾರಿ ಠಾಣೆಯ ಪೊಲೀಸರು ಹಠಾತ್ ಸಾವು ಎಂದು ಪ್ರಕರಣವನ್ನು ದಾಖಲಿಸಿಕೊಂಡು ಇದು ಸತಿ ಸಹಗಮನವೋ ಎಂಬುದರ ತನಿಖೆ ನಡೆಸುತ್ತಿದ್ದಾರೆ.
 
ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 

ವೆಬ್ದುನಿಯಾವನ್ನು ಓದಿ