ಅತ್ಯಾಚಾರ ವಿರೋಧಿಸಿದ್ದಕ್ಕೆ ಬೆಂಕಿ ಹಚ್ಚಿ ಕೊಂದ ಆರೋಪಿ

ಶುಕ್ರವಾರ, 3 ಜುಲೈ 2015 (20:52 IST)
ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸಿದ 35 ವರ್ಷ ವಯಸ್ಸಿನ ಮಹಿಳೆಯ ವರ್ತನೆಯಿಂದ ಆಕ್ರೋಶಗೊಂಡ ಆರೋಪಿಗಳು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ದಹಿಸಲು ಯತ್ನಿಸಿದ ಹೇಯ ಘಟನೆ ವರದಿಯಾಗಿದೆ.
  
ಕಾನ್ಪುರ್ ದೆಹಾಟ್‌‍ನ ಪಿಪ್ರಿ ಗ್ರಾಮದ ನಿವಾಸಿಯಾದ ಮಹಿಳೆ ಬೆಂಕಿಯಿಂದಾದ ಗಾಯಗಳಿದಾಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ ಎಂದು ಭೋಗ್ನಿಪುರ್ ಪೊಲೀಸ್ ಠಾಣೆಯ ಅಧಿಕಾರಿ ಅನೂಪ್ ಯಾದವ್ ತಿಳಿಸಿದ್ದಾರೆ.  
 
ಕಳೆದ ಜೂನ್ 25 ರಂದು ಪತಿಯ ಗೆಳೆಯನಾಗಿದ್ದ ಆರೋಪಿ ಮನೆಯೊಳಗೆ ನುಗ್ಗಿ ಎರಡು ಮಕ್ಕಳ ತಾಯಿಯಾಗಿದ್ದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆದರೆ, ಮಹಿಳೆ ಆರೋಪಿಯ ಯತ್ನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದ ಎನ್ನಲಾಗಿದೆ.
 
ಆರೋಪಿಯ ವಿರುದ್ಧ ಮೃತ ಮಹಿಳೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನ ಪತ್ತೆಗಾಗಿ ಹುಡುಕಾಟ ನಡೆಸಿದ್ದರು. 
 
ಘಟನೆ ನಡೆದ ಎರಡು ದಿನಗಳ ನಂತರ ಆರೋಪಿ ದಿನೇಶ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ