ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ನಾಗಿರೆಡ್ಡಿ ಅಪಘಾತದಲ್ಲಿ ಸಾವು

ಗುರುವಾರ, 24 ಏಪ್ರಿಲ್ 2014 (15:59 IST)
ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶೋಭಾ ನಾಗಿರೆಡ್ಡಿ ಹೈದರಾಬಾದ್‌ನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. 45 ವರ್ಷ ವಯಸ್ಸಿನ ನಾಗಿರೆಡ್ಡಿ ಅವರು ಕಾರಿನಲ್ಲಿ ಪ್ರಚಾರ ಮುಗಿಸಿಕೊಂಡು ವಾಪಸು ಬರುತ್ತಿದ್ದಾಗ ಕಾರು ಅಪಘಾತಗೊಂಡು ಪಲ್ಟಿ ಹೊಡೆಯಿತು. ಮುಂದಿನ ಸೀಟಿನಲ್ಲಿ ಕುಳಿತಿದ್ದ ನಾಗಿರೆಡ್ಡಿ ಕಾರಿನಿಂದ ಹೊರಗೆ ಎಸೆಯಲ್ಪಟ್ಟು ತಲೆಗೆ ತೀವ್ರವಾದ ಗಾಯಗಳಾಗಿತ್ತು.

ಹೈದರಾಬಾದ್ ಆಸ್ಪತ್ರಗೆ ಅವರನ್ನು ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನಾಗಿರೆಡ್ಡಿ ಕುರ್ನೂಲು ಜಿಲ್ಲೆಯ ಅಲಗಡ್ಡ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಅಲ್ಲಿಂದ ಅವರು ನಾಲ್ಕು ಬಾರಿ ಆಯ್ಕೆಯಾಗಿದ್ದರು. 1996ರಲ್ಲಿ ರಾಜಕೀಯ ಜೀವನಕ್ಕೆ ಪ್ರವೇಶಿಸಿದ ಅವರು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಚಿರಂಜೀವಿ ಪ್ರಜಾ ರಾಜ್ಯಂ ಪಕ್ಷದಲ್ಲಿ ಕೂಡ ಇದಕ್ಕೆ ಮುಂಚೆ ಇದ್ದರು.

ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್‌ಮೋಹನ್ ರೆಡ್ಡಿ, ಅವರ ತಾಯಿ ವಿಜಯಮ್ಮ ಮತ್ತು ಸಹೋದರಿ ಶರ್ಮಿಳಾ ತಮ್ಮ ಪ್ರಚಾರ ಸ್ಥಗಿತಗೊಳಿಸಿ ನಾಗಿರೆಡ್ಡಿ ಕುಟುಂಬವನ್ನು ಭೇಟಿ ಮಾಡಿ ಸಂತಾಪ ಸೂಚಿಸಿದರು. 

ವೆಬ್ದುನಿಯಾವನ್ನು ಓದಿ