ಇದೇ ಮಾ.13ರಿಂದ ಜೀ ಕನ್ನಡ ಭಿನ್ನ ಧಾರಾವಾಹಿ ಜೋಡಿಹಕ್ಕಿ

ಸೋಮವಾರ, 6 ಮಾರ್ಚ್ 2017 (16:12 IST)
ಕನ್ನಡ ಕಿರುತೆರೆ ವೀಕ್ಷಕರಿಗೆ ಹಿಂದಿನಿಂದಲೂ ಹೊಸ ರೀತಿಯ ಮನರಂಜನೆಯನ್ನು ತನ್ನ ಕಾರ್ಯಕ್ರಮಗಳ ಮೂಲಕ ನೀಡುತ್ತ ಬಂದಿರುವ ಜೀ ಕನ್ನಡ ವಾಹಿನಿ ಇದೇ 13ರಿಂದ ಮತ್ತೊಂದು ಪ್ರೀತಿ, ಪ್ರೇಮದ ಸುತ್ತ ಸಾಗುವ ಕಥಾನಕವನ್ನು ತರುತ್ತಿದೆ.  
 
ಈಗಾಗಲೇ ಮಹಾದೇವಿ, ನಾಗಿಣಿ, ಗಂಗಾ, ಅಂಜಲಿ, ವಾರಸ್ಧಾರದಂಥ ವಿಭಿನ್ನ ಶೈಲಿಯ ಧಾರಾವಾಹಿಗಳ ಮೂಲಕ ತನ್ನದೇ ಆದ ನೋಡುಗರನ್ನು ಗಳಿಸಿಕೊಂಡಿರುವ ಈ ವಾಹಿನಿ ಮತ್ತೊಮ್ಮೆ ಹೊಸ ಕಥೆಯ ಮೂಲಕ ಗಮನ ಸೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮೂಡಿಬರುತ್ತಿರುವ ಕಾಮಿಡಿ ಕಿಲಾಡಿಗಳು ಮತ್ತು ಡ್ರಾಮ ಜ್ಯೂನಿಯರ್ಸ್, ಜೀ ವಾಹಿನಿಯ ಟಿ.ಆರ್.ಪಿ.ಯನ್ನು ದ್ವಿಗುಣಗೊಳಿಸಿವೆ. 
 
ಹೀಗೆ  ಪ್ರತಿಯೊಂದು ಕಾರ್ಯಕ್ರಮವನ್ನೂ ಕೂಡ ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಕನ್ನಡಿಗರ ಮನೆ, ಮನಗಳಿಗೆ ತಲುಪಿಸುವ ಜವಾಬ್ದಾರಿಯನ್ನು  ಹೊತ್ತುಕೊಂಡಿರುವ ಜೀ ಚಾನೆಲ್, ಕನ್ನಡದ ನಂಬರ್ 1 ವಾಹಿನಿಯಾಗುವತ್ತ ತನ್ನ ಹೆಜ್ಜೆಯನ್ನಿಡುತ್ತಿದೆ. ಇದೀಗ ಜೀನಲ್ಲಿ ಪ್ರಸಾರಗೊಳ್ಳುತ್ತಿರುವ ವಿಭಿನ್ನ ಧಾರಾವಾಹಿಗಳ ಸಾಲಿಗೆ ಮತ್ತೊಂದು ಸೀರಿಯಲ್ ಹೊಸ ಸೇರ್ಪಡೆಯಾಗುತ್ತಿದೆ.   
 
“ಜೋಡಿಹಕ್ಕಿ” ಇದು ಹೆಸರೇ ಹೇಳುವಂತೆ ಇಬ್ಬರು ಮುದ್ದಾದ ಜೋಡಿ ಹೃದಯಗಳ ಸುತ್ತ ನಡೆಯುವ ಪ್ರೇಮಕಥೆಯಾಗಿದ್ದು, ಪ್ರೀತಿಯ ಹಲವು ಮಜಲುಗಳನ್ನು ಈ ಧಾರಾವಾಹಿಯ ಮೂಲಕ ಹೇಳಲಾಗುತ್ತಿದೆ. ರಾಜ್ಯದ ವಿದ್ಯಾಮಂತ್ರಿಯ ಮಗನಾದ ರಾಮನಿಗೆ ಓದುಬರಹ ಗೊತ್ತಿಲ್ಲ, ಕುಸ್ತಿ ಪಟುವಾಗಿರುವ ರಾಮನ ಉದ್ದೇಶ ಒಂದೇ, ತಾನು ಬ್ರಹ್ಮಚಾರಿಯಾಗಿರಬೇಕು, ಎಲ್ಲ ಪಂದ್ಯಗಳನ್ನು ಗೆದ್ದು ಉತ್ತಮ ಕುಸ್ತಿಪಟುವಾಗಬೇಕು ಅನ್ನೋದು. 
 
ಇದೊಂದೆ ಕಾರಣಕ್ಕೆ ಯಾವ ಹುಡುಗಿಯನ್ನು ಕೂಡ ಕಣ್ಣೆತ್ತಿ ಕೂಡ ನೋಡದ ರಾಮನ ಊರಿಗೆ ಶಾಲೆಯ ಟೀಚರ್ ಆಗಿ ಜಾನಕಿ ಬರುತ್ತಾಳೆ. ಪ್ರೀತಿಯೆಂದರೇನೆಂದು ಗೊತ್ತಿರದ, ಹುಡುಗಿಯರನ್ನು ಕಣ್ಣೆತ್ತಿ ಸಹ  ನೋಡದ ರಾಮ, ಜಾನಕಿಯ ಕಡೆ ಹೇಗೆ ಮನಸ್ಸು ಮಾಡ್ತಾನೆ, ನಂತರ ಆಕೆಯನ್ನು ಒಲಿಸಿಕೊಳ್ಳೋದಕ್ಕೆ ಆತ  ಪಡುವ ಪ್ರಯತ್ನಗಳು, ಅದರಿಂದ ಆಗುವ ಅನಾಹುತಗಳು, ಅಕ್ಷರವೇ ಗೊತ್ತಿರದ ರಾಮನಿಗೆ ಜಾನಕಿ ಒಲಿಯುತ್ತಾಳಾ ಅನ್ನೋದೇ ಜೋಡಿ ಹಕ್ಕಿ ಧಾರಾವಾಹಿಯ ಕಥಾಹಂದರ. 
 
ಈ ಕಥೆ ಪೂರ್ಣವಾಗಿ ಹಳ್ಳಿಯ ವಾತಾವರಣದಲ್ಲಿ ನಡೆಯಲಿದ್ದು, ಕಥೆಯಲ್ಲಿ ಹಳ್ಳಿಯ ಸೊಗಡಿನ ದೃಶ್ಯಗಳ ಜೊತೆಗೆ ಕುಸ್ತಿಯನ್ನು ಕೂಡ ಕಥೆಯ ಒಂದು ಭಾಗವಾಗಿ ತೆಗೆದುಕೊಳ್ಳಲಾಗಿದೆ. ತಾರಾಬಳಗದಲ್ಲಿ ತಾಂಡವ, ಚೈತ್ರಾ ರಾವ್, ರವಿ ಭಟ್, ಪಲ್ಲವಿ ಗೋಕುಲ್,  ಮಂಜುನಾಥ್ ಹೆಗಡೆ ಇನ್ನು ಹಲವಾರು ಕಲಾವಿದರು ಅಭಿನಯಿಸಿದ್ದಾರೆ.  
 
ಹಿರಿಯ ನಿರ್ದೇಶಕ ಆರೂರು ಜಗದೀಶ್ ನಿರ್ದೇಶನದಲ್ಲಿ ಮೂಡಿಬಂದಿರುವ  ಜೋಡಿಹಕ್ಕಿಗೆ, ಛಾಯಾಗ್ರಹಣ ಪ್ರಭಾಕರ್, ಕೃಷ್ಣ  ಅರಸ್ ಸಂಕಲನ, ಸ್ಮಿತಾ ಜಗದೀಶ್ ಹಾಗೂ ರತ್ನಾಕರ್ ಮರಾಟೆ ಅವರ ನಿರ್ಮಾಣವಿದೆ.  ಜೋಡಿ ಹಕ್ಕಿ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಇದೇ ಮಾರ್ಚ್ 13ರಿಂದ ಸಂಜೆ 7 ಗಂಟೆಗೆ  ಸೋಮವಾರದಿಂದ ಶನಿವಾರದವರೆಗೆ ಪ್ರಸಾರವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ