ಕಾಂಗ್ರೆಸ್ಸನ್ನು ಜಗ್ಗಾಡುತ್ತಿರುವ ಡಿಎಂಕೆ, ಟಿಎಂಕೆ

ಐದು ಸಂಪುಟ ಖಾತೆಗಳಿಗೆ ಬೇಡಿಕೆ ಇಟ್ಟಿರುವ ತೃಣಮೂಲ ಕಾಂಗ್ರೆಸ್ ಗುರುವಾರ ಕಾಂಗ್ರೆಸ್ ಜತೆಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿತಾದರೂ ಅಂತಿಮ ಫಲಿತಾಂಶ ಇನ್ನಷ್ಟೆ ಹೊರಬೀಳಬೇಕಿದೆ.

ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಪಕ್ಷದ ಹಿರಿಯ ನಾಯಕರಾದ ದಿನೇಶ್ ತ್ರಿವೇದಿ ಹಾಗೂ ಮುಕುಲ್ ರಾಯ್ ಅವರೊಂದಿಗೆ ಕಾಂಗ್ರೆಸ್ ನಾಯಕರಾದ ಎ.ಕೆ. ಆಂಟನಿ ಮತ್ತು ಅಹ್ಮದ್ ಪಟೇಲ್ ಅವರೊಂದಿಗೆ ನವದೆಹಲಿಯಲ್ಲಿ ಮಾತುಕತೆ ನಡೆಸಿದರು.

ನಾಲ್ಕು ಗಂಟೆಗಳ ಸುದೀರ್ಘ ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಪುಟ ದರ್ಜೆ ಕುರಿತು ಕಾಂಗ್ರೆಸ್ ನಿರ್ಧರಿಸಬೇಕಾಗಿದೆ ಅಲ್ಲದೆ ತಮ್ಮ ಪಕ್ಷವು ಸರ್ಕಾರದಲ್ಲಿ ಸಚಿವ ಖಾತೆಗಳಿಗೆ ಚೌಕಾಶಿ ಮಾಡುತ್ತಿಲ್ಲ ಎಂದು ನುಡಿದರು.

ಕಾಂಗ್ರೆಸ್ ಜತೆ ಸಂಬಂಧ ಚೆನ್ನಾಗುಳಿಯಬೇಕು. ನಿರ್ಧಾರ ಕೈಗೊಳ್ಳುವುದು ಕಾಂಗ್ರೆಸ್‌ಗೆ ಬಿಟ್ಟಿದ್ದು. ನಮಗೆ ಯಾವುದೇ ಬೇಡಿಕೆ ಇಲ್ಲ ಎಂದು ಸಿಡಿಸಿಡಿ ಅನ್ನುತ್ತಿದ್ದ ಮಮತಾ ನುಡಿದರು. ಅಲ್ಲದೆ ಸಚಿವ ಖಾತೆಗಿಂತ ಸ್ಥಿರ ಸರ್ಕಾರ ನಮಗೆ ಬೇಕಾಗಿದೆ ಎಂದು ಅವರು ನುಡಿದರು.

ತೃಣಮೂಲ ಕಾಂಗ್ರೆಸ್ 19 ಸ್ಥಾನಗಳನ್ನು ಹೊಂದಿದ್ದು, ಕನಿಷ್ಠ ಎರಡು ಸಂಪುಟ ದರ್ಜೆ ಹಾಗೂ ಮ‌ೂರು ರಾಜ್ಯಖಾತೆಗಳನ್ನು ಪಡೆಯುವ ಸಾಧ್ಯತೆಗಳಿವೆ.

ಡಿಎಂಕೆ ರೈಲ್ವೇ ಖಾತೆಗೆ ಪಟ್ಟು
ಈ ಮಧ್ಯೆ ಡಿಎಂಕೆ ರೈಲ್ವೇ ಖಾತೆಗೆ ಪಟ್ಟು ಹಿಡಿದಿದ್ದು ಅದು ಲಭಿಸುವ ಸಂಭವಗಳಿವೆ ಎಂದು ಮೂಲಗಳು ಹೇಳುತ್ತಿವೆ. ದಯಾನಿಧಿ ಮಾರನ್ ಅವರಿಗೆ ಟೆಲಿಕಾಂ ಖಾತೆ ನೀಡಲು ಕಾಂಗ್ರೆಸ್ ಉತ್ಸುಕವಾಗಿದ್ದರೂ, ಹಿಂದಿನ ಸಂಪುಟದಲ್ಲಿ ಸಚಿವರಾಗಿದ್ದ ರಾಜ ಹಾಗೂ ಟಿ. ಆರ್. ಬಾಲು ಅವರಿಗೆ ಖಾತೆ ನೀಡಲು ಕಾಂಗ್ರೆಸ್‌ಗೆ ಇಷ್ಟವಿಲ್ಲ. ಅಂತಿಮವಾಗಿ ಡಿಎಂಕೆ ಎಷ್ಟು ಮತ್ತು ಯಾವ್ಯಾವ ಖಾತೆಗಳನ್ನು ಗಳಿಸಲಿದೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.

ವೆಬ್ದುನಿಯಾವನ್ನು ಓದಿ