ಗಿಲಾನಿಯನ್ನು ಭೇಟಿ ಮಾಡಲು ಮೋದಿ ಯಾವುದೇ ದೂತರನ್ನು ಕಳುಹಿಸಿಲ್ಲ : ಬಿಜೆಪಿ

ಶನಿವಾರ, 19 ಏಪ್ರಿಲ್ 2014 (12:04 IST)
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಾಶ್ಮೀರ ಸಮಸ್ಯೆಯ ಕುರಿತು ಮಾತುಕತೆ ನಡೆಸಲು, ಇಬ್ಬರು ವ್ಯಕ್ತಿಗಳನ್ನು ಪ್ರತ್ಯೇಕತಾ ಸಂಸ್ಥೆ, ಹುರ್ರೈ ಕಾನ್ಫರೆನ್ಸ್ ಮುಖ್ಯಸ್ಥ ಸಯದ್ ಅಲಿ ಷಾ ಗಿಲಾನಿ ಬಳಿ ಕಳಿಸಿದ್ದರು ಎಂಬ ಮಾಧ್ಯಮ ವರದಿಗಳನ್ನು ಬಿಜೆಪಿ ತಳ್ಳಿ ಹಾಕಿದೆ.
PTI

ಗಿಲಾನಿಯವರಿಗೆ ಸಮಸ್ಯೆಯನ್ನು ಬಗೆಹರಿಸುವ ವಾಗ್ದಾನ ನೀಡಿ, ಸಹಾನುಭೂತಿಯನ್ನು ಗಿಟ್ಟಿಸುವ ಉದ್ದೇಶದಿಂದ ಮೋದಿ ಮಾತುಕತೆಯನ್ನು ಆಯೋಜಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಗಿಲಾನಿ ಹೇಳಿಕೆಗಳು ಕುತಂತ್ರದ್ದು ಮತ್ತು ಆಧಾರರಹಿತವಾದದ್ದು ಎಂದಿರುವ ಪಕ್ಷ, ಕಾಶ್ಮೀರ ವಿಷಯದ ಬಗ್ಗೆ ಮಾತುಕತೆ ನಡೆಸಲು ದೂತರನ್ನು ಕಳುಹಿಸಿ ಗಿಲಾನಿಯವರನ್ನು ಭೇಟಿ ಮಾಡುವ ಪ್ರಯತ್ನ ಮಾಡಿರುವ ಸುದ್ದಿಗಳಲ್ಲಿ ಹುರುಳಿಲ್ಲ ಎಂದು ತಿಳಿಸಿದೆ.

'ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮತ್ತು ಈ ವಿಷಯದಲ್ಲಿ ಯಾವುದೇ ಚರ್ಚೆಯ ಅಗತ್ಯವಿಲ್ಲ' ಎಂದು ಬಿಜೆಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಬುಧವಾರ ನವದೆಹಲಿಯಿಂದ ವಾಪಸ್ಸಾದ ನಂತರ ಗೃಹಬಂಧನಕ್ಕೆ ಒಳಗಾಗಿರುವ ಗಿಲಾನಿ 'ಮಾರ್ಚ್ 22 ರಂದು ಇಬ್ಬರು ಕಾಶ್ಮೀರಿ ಪಂಡಿತ್‌ರು ಮೋದಿಯವರ ಸಂದೇಶವಾಹಕ ರಾಗಿ ತಮ್ಮ ಬಳಿ ಬಂದಿದ್ದರು ಮತ್ತು ಕಾಶ್ಮೀರದ ಸಮಸ್ಯೆಯ ಬಗ್ಗೆ ಮೋದಿ ಜತೆ ಮಾತನಾಡಲು ಕೇಳಿಕೊಂಡಿದ್ದರು' ಎಂದು ಹೇಳಿದ್ದರು.

'ಮೋದಿ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ದೂತರು ಹೇಳಿದರು. ನಾನು ಅವರ ಪ್ರಸ್ತಾವನೆಯನ್ನು ನಿರಾಕರಿಸಿದೆ. ಮೋದಿ ಆರ್‌ಎಸ್‌ಎಸ್ ನ ವ್ಯಕ್ತಿ. ನಾನು ಕಾಶ್ಮೀರದ ವಿಷಯದಲ್ಲಿ ಯಾವುದೇ ವ್ಯವಹಾರಿಕ ನೀತಿಯನ್ನು ಅನುಸರಿಸಲು ಬಯಸುವುದಿಲ್ಲ' ಎಂದು ಗಿಲಾನಿ ಹೇಳಿಕೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ