ನರೇಂದ್ರ ಮೋದಿ ಪೂಜೆಯಿಂದ ಬಿಜೆಪಿ ಪಕ್ಷ ಅವನತಿಯತ್ತ: ಜಸ್ವಂತ್
ಬುಧವಾರ, 26 ಮಾರ್ಚ್ 2014 (20:38 IST)
PTI
ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧದ ವಾಗ್ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿರುವ ಬಂಡಾಯ ಎದ್ದಿರುವ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ‘ವ್ಯಕ್ತಿಯ ವೈಭವೀಕರಣ’ ಪ್ರಜಾಪ್ರಭುತ್ವ ಮತ್ತು ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ಬಾರ್ಮೇರ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ಒಂದು ದಿನದ ನಂತರ ಮಾತನಾಡಿದ ಅವರು ‘ಒಬ್ಬ ವ್ಯಕ್ತಿಯನ್ನು ಕೇಂದ್ರವಾಗಿರಿಸಿಕೊಂಡು ಎಲ್ಲವನ್ನೂ ನಡೆಸುವುದು ಸರಿಯಲ್ಲ. ಅದು ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಬಹುಶಃ ಯಾವುದೋ ಯೋಜನೆ ಅನ್ವಯ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ನನ್ನನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡುತ್ತಿದ್ದಾರೆ. ನನ್ನನ್ನು ವಂಚಿಸಲಾಗಿದೆ ಮತ್ತು ಅವಮಾನಿಸಲಾಗಿದೆ. ನನಗೆ ನಿರಾಶೆಯಾಗಿದೆ. ಆದರೆ ನಾನು ಪಕ್ಷ ತೊರೆಯುವುದಿಲ್ಲ. ಅವರು ಬೇಕಿದ್ದರೆ ಉಚ್ಚಾಟಿಸಲಿ’ ಎಂದು ಜಸ್ವಂತ್ ಹೇಳಿದ್ದಾರೆ.
ಕಾಂಗ್ರೆಸ್ನಿಂದ ಒಂದು ವಾರದ ಹಿಂದೆ ಬಿಜೆಪಿ ಸೇರಿರುವ ಸೋನಾರಾಂ ಚೌಧರಿ ಅವರಿಗೆ ಬಾರ್ಮೇರ್ ಲೋಕಸಭಾ ಕ್ಷೇತದ ಟಿಕೆಟ್ ನೀಡಿರುವ ಪಕ್ಷದ ನಿರ್ಧಾರ ವಿರೋಧಿಸಿ ಜಸ್ವಂತ್ ಬಂಡಾಯ ಎದ್ದಿದ್ದಾರೆ.