ವಿಜಯ್ ಮಲ್ಯ ಕನ್ನಡ ನೆಲದ ಮಣ್ಣಿನ ಮಗ: ದೇವೇಗೌಡ

ಶನಿವಾರ, 12 ಮಾರ್ಚ್ 2016 (15:09 IST)
ಮದ್ಯದ ದೊರೆ ವಿಜಯ್ ಮಲ್ಯ ಕರ್ನಾಟಕದ ಪುತ್ರನಾಗಿದ್ದು, ದೇಶದಿಂದ ಓಡಿಹೋಗುತ್ತಿಲ್ಲ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.
 
ವಿಜಯ್ ಮಲ್ಯ ತಪ್ಪಿಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದಾರೆ ಎನ್ನುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೌಡರು, ಜಾರಿ ನಿರ್ದೇಶನಾಲಯ ನೀಡಿದ ನೋಟಿಸ್‌ಗಳಿಗೆ ಈಗಾಗಲೇ ಉತ್ತರಿಸಿದ್ದಾರೆ ಎಂದು ತಿರುಗೇಟು ನೀಡಿದರು.
 
ಪ್ರಸಕ್ತ ಸಮಯದಲ್ಲಿ ಎಲ್ಲಾ ವಿಮಾನಯಾನ ಸಂಸ್ಥೆಗಳು ನಷ್ಟವನ್ನು ಎದುರಿಸುತ್ತಿರುವುದರಿಂದ ಜಾಗತಿಕ ಮಟ್ಟದ ಒಬ್ಬ ಉದ್ಯಮಿಯನ್ನು ಗುರಿಯಾಗಿಸಿ ಆರೋಪ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಜಾರಿ ನಿರ್ದೇಶನಾಲಯ, ವಿಜಯ್ ಮಲ್ಯ ಮತ್ತು ಕೆಲ ಕಿಂಗ್‌ಫಿಶರ್ ಉದ್ಯೋಗಿಗಳನ್ನು ಈಗಾಗಲೇ ಪ್ರಶ್ನಿಸಿದೆ. ಆದರೆ, ಮಲ್ಯ ದೇಶ ತೊರೆದು ವಿದೇಶಕ್ಕೆ ಹೋಗಿದ್ದಾರೆ ಎನ್ನುವ ವರದಿಗಳು ಸಂಸತ್ತಿನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದವು.
 
ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂಪಾಯಿ ಸಾಲ ಉಳಿಸಿಕೊಂಡಿರುವ ಮಲ್ಯ, ದೇಶದ ಸಂವಿಧಾನದಂತೆ ನಡೆಯುತ್ತೇನೆ. ಓಡಿಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
 
ನಾನೊಬ್ಬ ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿಯಾಗಿದ್ದರಿಂದ ವಿದೇಶಗಳಿಗೆ ಪ್ರಯಾಣಿಸುತ್ತಿರುತ್ತೇನೆ. ನಾನು ಭಾರತವನ್ನು ತೊರೆದು ಹೋಗಿಲ್ಲ ಎಂದು ಉದ್ಯಮಿ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ