ಪ್ರತಿಪಕ್ಷ ರಚನೆಗೆ ಅಮ್ಮನ ಬೆಂಬಲ ಕೋರಿದ ದೀದಿ

ಮಂಗಳವಾರ, 20 ಮೇ 2014 (08:45 IST)
ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಸತ್ತಿನಲ್ಲಿ ಪ್ರತಿಪಕ್ಷದ ಸ್ಥಾನ ನಿರ್ವಹಿಸಲು ಮೈತ್ರಿ ಕೂಟ ರಚಿಸುವ ಉದ್ದೇಶದೊಂದಿಗೆ , ತಮಿಳುನಾಡಿನ  ಜಯಲಲಿತಾ ಜತೆ ಮಾತುಕತೆ ನಡೆಸಿದ್ದಾರೆ.
 
ಲೋಕಸಭೆಯಲ್ಲಿ ರಾಜ್ಯದ ಹಿತಾಸಕ್ತಿ ಕಾಯುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದುಮುಖ್ಯಸ್ಥರ ಟಿಎಂಸಿ ನಾಯಕರು ಕೋಲ್ಕೋತಾದಲ್ಲಿ ತಿಳಿಸಿದ್ದಾರೆ.
 
ತಮ್ಮ ರಾಜ್ಯದೊಳಗೆ ಮೋದಿ ಅಲೆ ಪ್ರವೇಶಿಸದಂತೆ ತಡೆಗಟ್ಟುವಲ್ಲಿ ಮಮತಾ ಮತ್ತು ಜಯಲಲಿತಾ ಯಶಸ್ವಿಯಾಗಿದ್ದು ಅಬ್ಬರದ ಗೆಲುವನ್ನು ದಾಖಲಿಸಿದ್ದಾರೆ. 
 
ಎಐಡಿಎಂಕೆ ತಮಿಳುನಾಡಿನ 39 ಸ್ಥಾನಗಳ ಪೈಕಿ 37 ಸ್ಥಾನಗಳನ್ನು ಗೆದ್ದು ಕೊಂಡರೆ, ಪಶ್ಚಿಮ ಬಂಗಾಳದಲ್ಲಿ ನಿಚ್ಚಳ ಗೆಲುವನ್ನು ದಾಖಲಿಸಿರುವ ಮಮತಾ ಪಕ್ಷ 42 ಲೋಕಸಭಾ ಸ್ಥಾನಗಳಲ್ಲಿ 34ನ್ನು ತನ್ನದಾಗಿಸಿ ಕೊಂಡಿದೆ. ಕಾಂಗ್ರೆಸ್ ದೇಶದಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಗೆದ್ದು ಬಂದರೆ, ಜಯಲಲಿತಾರವರ ಪಕ್ಷ ಮೂರನೇ ಮತ್ತು ಮಮತಾ ಪಕ್ಷ ನಾಲ್ಕನೇ ಸ್ಥಾನದಲ್ಲಿವೆ. 
 
ಲೋಕಸಭೆಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾದ ಸೋನಿಯಾ ನೇತೃತ್ವದ ಕಾಂಗ್ರೆಸ್, ಸದನದಲ್ಲಿ ಪ್ರತಿಪಕ್ಷದ ಸ್ಥಾನ ಪಡೆಯಲು ಅಗತ್ಯವಿರುವ ಶೇ.10ಕ್ಕೂ ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿರುವುದರಿಂದ ಪ್ರತಿಪಕ್ಷ ಸ್ಥಾನದ ಮೇಲೆ ಹಲವು ಪಕ್ಷಗಳು ಕಣ್ಣಿಟ್ಟಿವೆ.
 
''ಸಂಸತ್ತಿನಲ್ಲಿ ವಿರೋಧ ಪಕ್ಷದ ಸ್ಥಾನ ಗಿಟ್ಟಿಸುವ ನಿಟ್ಟಿನಲ್ಲಿ  ಹಲವು ಪಕ್ಷಗಳು ಒಟ್ಟುಗೂಡಿ ಸ್ಪೀಕರ್‌ಗೆ ಪತ್ರ ಬರೆದರೆ, ಸ್ಪೀಕರ್ ಅವರ ಮನವಿಯನ್ನು ಅಂಗೀಕೃತಗೊಳಿಸಬಹುದು '' ಎಂದು ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ