ಬಜೆಟ್‌ನಲ್ಲಿ ದೂರದಷ್ಟಿ ಯೋಜನೆಗಳಿಲ್ಲ: ವಿಶ್ಲೇಷಕರು

ಮಂಗಳವಾರ, 27 ಮಾರ್ಚ್ 2012 (11:45 IST)
PTI
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಎಲ್ಲ ವರ್ಗದವರನ್ನು ಖುಷಿ ಪಡಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಇದು ಅಭಿವೃದ್ಧಿಪರವಾದ ಬಜೆಟ್ ಅಲ್ಲ. ರಾಜ್ಯದ ವಿಕಾಸಕ್ಕೆ ಅನುಕೂಲವಾಗುವ ದೂರದೃಷ್ಟಿಯ ಯೋಜನೆಗಳು ಕಾಣುತ್ತಿಲ್ಲವೆಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಬಜೆಟ್ ವೆಚ್ಚ ಶೇ 20ರಷ್ಟು ಹೆಚ್ಚಾಗಿದೆ. ಆದರೆ ಅಭಿವೃದ್ಧಿ ವೆಚ್ಚ ಜಾಸ್ತಿಯಾಗಿಲ್ಲ. ರೆವೆನ್ಯೊ ಕೊರತೆಯೂ ಹೆಚ್ಚಳವಾಗಿದೆ. ಹಣದುಬ್ಬರ ಜಾಸ್ತಿಯಾಗಬಹುದು. ಬಡವರಿಗೆ ವಿನಾಯಿತಿ ನೀಡಿ, ಶ್ರೀಮಂತರಿಗೆ ತೆರಿಗೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಬಡವರಿಗೆ ಅನುಕೂಲವಾಗುವುದಿಲ್ಲ. ತೆರಿಗೆ ವಿನಾಯಿತಿಯ ನೇರ ಲಾಭ ಬಡವರಿಗೆ ಸಿಗುವುದಿಲ್ಲ.ಕಳೆದ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಅಭಿವೃದ್ಧಿ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಅನು ಷ್ಠಾನವಾಗಿಲ್ಲ ಇಲಾಖಾವಾರು ಹಂಚಿಕೆಯಾಗಿದ್ದ ಹಣ ಖರ್ಚಾಗಿಲ್ಲ. ಒಟ್ಟಾರೆ ಬಜೆಟ್ ವೆಚ್ಚ ಶೇ 20ರಷ್ಟು ಜಾಸ್ತಿಯಾಗಿದ್ದರೂ, ಸಕಾರಾತ್ಮಕವಾಗಿ ಕಾಣುತ್ತಿಲ್ಲ.

ವೈದ್ಯಕೀಯ ಪದವೀಧರರಿಗೆ ಗ್ರಾಮೀಣ ಪ್ರದೇಶದ ಸೇವೆಯನ್ನು ಕಡ್ಡಾಯಗೊಳಿಸುವುದು ಒಳ್ಳೆಯ ನಿರ್ಧಾರ. ಆದರೆ ಅದನ್ನು ಯಾವ ರೀತಿ ಅನುಷ್ಠಾನಗೊಳಿಸಲಾಗುತ್ತದೆ ಎಂಬುದು ಮುಖ್ಯ. ಇದು ಕೇವಲ ಘೋಷಣೆಯಾಗಿ ಉಳಿಯಬಾರದು. ಎಲ್ಲ ವರ್ಗದವರನ್ನು ತೃಪಿಪಡಿಸುವ ಕೆಲಸ ಬಜೆಟ್‌ನಲ್ಲಿ ಆಗಿದೆ.

ಆದರೆ ಹೇಗೆ ಅನುಷ್ಠಾನಗೊಳಿಸುತ್ತೀರಿ ಎಂಬುದು ಮುಖ್ಯ. ಅಬಕಾರಿ ತೆರಿಗೆ ಜಾಸ್ತಿ ಮಾಡಿರುವುದರಿಂದ ಆದಾಯ ಹೆಚ್ಚಳವಾಗುತ್ತದೆ ನಿಜ. ಆದರೆ ಅಭಿವೃದ್ಧಿಗೆ ಪ್ರೋತ್ಸಾಹ ಕೊಟ್ಟಿರುವಂತಹ ಕಾರ್ಯಕ್ರಮಗಳು ಕಂಡು ಬರುತ್ತಿಲ್ಲ. ಇರುವುದರಲ್ಲಿ ಕೃಷಿ, ಗ್ರಾಮೀಣಾಭಿವೃದ್ಧಿಗೆ ಸ್ವಲ್ಪ ಒತ್ತು ಸಿಕ್ಕಿದೆ.

ಬಜೆಟ್ ಮಹತ್ವ 2-3 ದಿನಗಳಲ್ಲಿ ಗೊತ್ತಾಗಲಿದೆ. ಮುಖ್ಯಮಂತ್ರಿ ಬದಲಾವಣೆ ಆಗಬಹುದು ಎಂಬ ಊಹಾಪೋಹಗಳು ಕೇಳಿ ಬರುತ್ತಿರುವುದರಿಂದ ಬಜೆಟ್ ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಅನುಷ್ಠಾನವಾಗುತ್ತವೆ ಎಂಬುದನ್ನು ಈಗಲೇ ಹೇಳುವುದು ಕಷ್ಟ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ವೆಬ್ದುನಿಯಾವನ್ನು ಓದಿ