ಖ್ಯಾತ ಹಿಂದೂಸ್ತಾನಿ ಗಾಯಕ ಭೀಮಸೇನ ಜೋಶಿ ಇನ್ನಿಲ್ಲ

ಸೋಮವಾರ, 24 ಜನವರಿ 2011 (10:56 IST)
ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಭೀಮಸೇನ ಗುರುರಾಜ್ ಜೋಶಿ (89) ಇಂದು ಬೆಳಗ್ಗೆ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಭಾರತರತ್ನ ಪಡೆದ ಮೊದಲ ಹಿಂದೂಸ್ತಾನಿ ಗಾಯಕ ಎಂಬ ಗೌರವಕ್ಕೆ ಪಾತ್ರರಾಗಿದ್ದ ಜೋಶಿ ಅವರ ನಿಧನದಿಂದ ಸಂಗೀತ ಪ್ರೇಮಿಗಳಿಗೆ ಆಘಾತವಾಗಿದೆ.

ಗಾಯನದ ಭೀಮಸೇನ, ಭಾರತದ ರತ್ನ: ಜೋಶಿಗೆ ಶ್ರದ್ಧಾಂಜಲಿ

ಹಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಂಗೀತ ಸಾಮ್ರಾಟ ಜೋಶಿ ಅವರು ಇಂದು ಬೆಳಗ್ಗೆ 8.10ಕ್ಕೆ ನಿಧನರಾದರು. ಇದು ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.

ಅಪ್ಪಟ ಕನ್ನಡಿಗರಾದ ಜೋಶಿ 1922 ಫೆಬ್ರವರಿ 4ರಂದು ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಜನಿಸಿದ್ದರು. ಏಳನೆ ವಯಸ್ಸಿನಲ್ಲಿ ಸಂಗೀತ ಆರಂಭಿಸಿದ್ದ ಅವರು ದೇಶದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ಸಹಿತ ಹಲವು ಪ್ರಶಸ್ತಿಗಳಿಂದ ಭಾಜನರಾಗಿದ್ದರು.

ಅವರು ಹಾಡಿದ 'ಭಾಗ್ಯದ ಲಕ್ಷ್ಮೀ ಬಾರಮ್ಮ' ಯಾರು ತಾನೇ ಮರೆಯಲು ಸಾಧ್ಯ. ಹಾಗೆಯೇ 'ಮಿಲೇ ಸುರ್ ಮೇರಾ ತುಮ್ಹಾರಾ' ಗೀತೆಗೂ ಜೋಶಿ ಧ್ವನಿ ನೀಡಿದ್ದರು.

ಹಿಂದೂಸ್ತಾನಿ ಸಂಗೀತದ ಮೇರು ಪರ್ವತವಾಗಿರುವ ಅವರು ಹಲವು ಸಿನಿಮಾಗಳ ಗೀತೆಗಳಿಗೂ ಧ್ವನಿ ನೀಡಿದ್ದರು. ಕಿರಾಣ ಘರಾಣ ಸಂಗೀತದ ಸದಸ್ಯರೂ ಆಗಿರುವ ಅವರು 2008ರಲ್ಲಿ ಭಾರತರತ್ನ ಪ್ರಶಸ್ತಿಯಿಂದ ಗೌರವಾನ್ವಿತರಾಗಿದ್ದರು.

ಪ್ರಶಸ್ತಿಗಳ ಪಟ್ಟಿ ಇಲ್ಲಿವೆ...
1972: ಪದ್ಮ ಶ್ರೀ
1976: ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
1985: ಪದ್ಮ ಭೂಷಣ
1985: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ- ಅತ್ಯುತ್ತಮ ಗಾಯಕ
1999: ಪದ್ಮ ವಿಭೂಷಣ
2000: ಆದಿತ್ಯವಿಕ್ರಮ್ ಬಿರ್ಲಾ ಕಲಶಿಖರ್ ಪುರಸ್ಕಾರ
2001: ನಾಡೋಜ ಪ್ರಶಸ್ತಿ
2002: ಮಹಾರಾಷ್ಟ್ರ ಭೂಷಣ
2003: ಕೇರಳ ಸರಕಾರದಿಂದ ಸ್ವಾತಿ ಸಂಗೀತ ಪುರಸ್ಕಾರ
2005: ಕರ್ನಾಟಕ ರತ್ನ
2008: ಭಾರತ ರತ್ನ
2008: ಸ್ವಾಮಿ ಹರಿದಾಸ ಪ್ರಶಸ್ತಿ
2009: ದೆಹಲಿ ಸರಕಾರದಿಂದ ಜೀವಮಾನ ಸಾಧನೆ ಪ್ರಶಸ್ತಿ
2010: ಎಸ್. ವಿ. ರಾಮಸ್ವಾಮಿ ರಾವ್ ರಾಷ್ಟ್ರೀಯ ಪ್ರಶಸ್ತಿ

ವೆಬ್ದುನಿಯಾವನ್ನು ಓದಿ