ಕತಾರ್: ಎನ್‌ಆರ್‌ಐ ವೇದಿಕೆಗೆ ಕರ್ನಾಟಕ ಪ್ರತಿನಿಧಿ ಪಾಟೀಲ್

PR
ಕತಾರ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಮತ್ತು ಕರ್ನಾಟಕ ರಾಜ್ಯ ನಡುವೆ ಸಾಂಸ್ಕೃತಿಕ ಮತ್ತು ವ್ಯವಹಾರ ಸಂಬಂಧಗಳಿಗೆ ಸೇತುವೆಯಂತೆ ಕಾರ್ಯ ನಿರ್ವಹಿಸುವ ವೇದಿಕೆಯೊಂದನ್ನು ರಚಿಸಲಾಗಿದ್ದು, ಈ ಮೂಲಕ ಕನ್ನಡಿಗರ ಬಹುದಿನಗಳ ಕನಸೊಂದು ನನಸಾದಂತಾಗಿದೆ.

ಕತಾರ್ ಎನ್ಆರ್ಐ ವೇದಿಕೆಯನ್ನು ಈಚೆಗೆ ದೋಹಾದಲ್ಲಿ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷ ಗಣೇಶ್ ಕಾರ್ಣಿಕ್ ಮತ್ತು ಕತಾರ್‌ನಲ್ಲಿರುವ ಭಾರತದ ರಾಯಭಾರಿ ದೀಪಾ ಗೋಪಾಲನ್ ವಾಧ್ವಾ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ಭಾರತದ ಖ್ಯಾತ ಉದ್ಯಮಿ ಹಸನ್ ಚೌಗ್ಲೆ ಮುಖ್ಯ ಅತಿಥಿಯಾಗಿದ್ದರು.

PR
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಈ ವೇದಿಕೆಯ ಮಹತ್ವವನ್ನು ತಿಳಿಸಿ, ಕರ್ನಾಟಕದಲ್ಲಿ ಉದ್ಯಮ ಆರಂಭಿಸಲು ಭಾರತೀಯ ಉದ್ಯಮಿಗಳಿಗೆ ಆಹ್ವಾನ ನೀಡಿದರು ಮತ್ತು ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು. ರಾಜ್ಯ ಸರ್ಕಾರವು ಈ ವೇದಿಕೆಗೆ ನೇಮಿಸಿದ ಪ್ರತಿನಿಧಿ ಅರವಿಂದ ಪಾಟೀಲ್ ಅವರಿಗೆ ಸಂಪೂರ್ಣ ಸಹಕಾರ ನೀಡಲು ಅವರು ಕನ್ನಡ ಸಂಘಗಳ ಅಧ್ಯಕ್ಷರನ್ನು ಕೋರಿದರು.

ವೇದಿಕೆ ಆರಂಭಿಸಿದ ಕ್ರಮವನ್ನು ಶ್ಲಾಘಿಸಿದ ರಾಯಭಾರಿ ದೀಪಾ ಅವರು, ಕತಾರ್‌ಗೆ ಸಂಬಂಧಿಸಿದಂತೆ ಭಾರತದಲ್ಲಿ ನೆರವು ಬೇಕಾದವರಿಗೆ ಈ ವೇದಿಕೆಯು ಬಹಳ ಪ್ರಯೋಜನಕಾರಿ ಎಂದರು. ಹಸನ್ ಚೌಗ್ಲೆ ಅವರು ವೇದಿಕೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರಲ್ಲದೆ, ಕತಾರ್‌ನಲ್ಲಿರುವ ಭಾರತೀಯರಿಗೆ ಗೊತ್ತಿರುವಂತಹ ಅರವಿಂದ ಪಾಟೀಲ್ ಅವರನ್ನೇ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆ ಮಾಡಿರುವುದಕ್ಕೆ ಕಾರ್ಣಿಕ್ ಅವರನ್ನು ಅಭಿನಂದಿಸಿದರು. ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ ವಂದಿಸಿದರು.

ವೆಬ್ದುನಿಯಾವನ್ನು ಓದಿ