ರಾಜ್ಯ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ಬಗ್ಗೆ ಎಷ್ಟೇ ಮನವಿ ಮಾಡಿದರೂ ಸಕರಾತ್ಮವಾಗಿ ಸ್ಪಂದಿಸದಿರುವ ಕೇಂದ್ರ ಸರಕಾರ ನಿಲುವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ, ಕೇಂದ್ರವು ಹೊಂಡದಲ್ಲಿ ಬಿದ್ದ ಕೋಣದಂತೆ ವರ್ತಿಸುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
ನಾವು ಎಷ್ಟೇ ಮನವಿ ಮಾಡಿದರೂ, ಬೊಬ್ಬೆ ಹಾಕಿದರೂ ಕಿವಿ ಕೇಳಿಸದಂತಹ ಪರಿಸ್ಥಿತಿ ಬಂದೊದಗಿದೆ. ರಾಜ್ಯದ ವಿದ್ಯುತ್ ಕೊರತೆ ಬಗ್ಗೆ ಕೇಂದ್ರ ನಿರಾಸಕ್ತಿ ತಾಳಿದೆ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರತಿಯಾಗಿ ಸಿಎಂ ಸದಾನಂದ ಗೌಡ ತಿರುಗೇಟು ನೀಡಿದರು.
ರಾಜ್ಯ ಸರಕಾರದ ವಿರುದ್ಧ ಭಾನುವಾರ ಹರಿಹಾಯ್ದಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ಬಗ್ಗೆ ಕೇಂದ್ರವನ್ನು ದೂರುವುದು ಸರಿಯಲ್ಲ ಎಂದು ತಿಳಿಸಿದ್ದರು.
ಇದಕ್ಕೆ ಪ್ರತಿಯಾಗಿ ಹೇಳಿಕೆ ಕೊಟ್ಟಿರುವ ಮುಖ್ಯಮಂತ್ರಿ ಸದಾನಂದ ಗೌಡ, ರಾಜ್ಯಕ್ಕೆ ಬರಬೇಕಾಗಿರುವ ವಿದ್ಯುತ್ನಲ್ಲಿ ಕಡಿತ ಮಾಡಲಾಗುತ್ತಿದೆ. ನಮ್ಮ ಯಾವುದೇ ಮನವಿಗೂ ಸ್ಪಂದಿಸುತ್ತಿಲ್ಲ. ಎಲ್ಲ ವಿಷಯಗಳೂ ಗೊತ್ತಿದ್ದರೂ ಗೊತ್ತಿಲ್ಲದಂತೆ ವರ್ತಿಸುತ್ತಿದೆ. ಇದು ತಾರತಮ್ಯ ಧೋರಣೆ ಅಲ್ಲದಿದ್ದರೆ ಮತ್ತೇನೂ ಎಂದು ತಿರುಗೇಟು ನೀಡಿದರು.