ಸಿಎಂ ಸದಾನಂದ ಗೌಡರಿಗಾಗಿ ಪರಿಷತ್ ಸ್ಥಾನ ತ್ಯಾಗ ಮಾಡಿದ ಶಂಕರಪ್ಪ

ಭಾನುವಾರ, 9 ಅಕ್ಟೋಬರ್ 2011 (15:32 IST)
PR
ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಮೇಲ್ಮನೆ ಪ್ರವೇಶಿಸುವ ನಿಟ್ಟಿನಲ್ಲಿ ಎಂಎಲ್‌ಸಿ ಶಂಕರಪ್ಪ ತಮ್ಮ ಸ್ಥಾನ ತ್ಯಜಿಸಲು ಮುಂದಾಗಿದ್ದಾರೆ.

ರಾಯಚೂರಿನ ಲಿಂಗಸೂರಿನಲ್ಲಿ ಭಾನುವಾರ ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಶಂಕರಪ್ಪ ಈ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಎಂದೇ ಕರೆಯಲ್ಪಡುವ ಶಂಕರಪ್ಪ ಪಕ್ಷದ ಆದೇಶದಂತೆ ಪರಿಷತ್ ಸ್ಥಾನ ತ್ಯಜಿಸುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು.

ಅಲ್ಲದೇ ಪಕ್ಷದಿಂದ ಉನ್ನತ ಸ್ಥಾನದ ಭರವಸೆ ಸಿಕ್ಕಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸಂಸದರಾಗಿದ್ದರಿಂದ 6 ತಿಂಗಳ ಒಳಗಾಗಿ ವಿಧಾನಪರಿಷತ್ ಸದಸ್ಯತ್ವ ಪಡೆಯಬೇಕಾಗಿದೆ.

ಇದೀಗ ಸದ್ಯಕ್ಕೆ ಸರ್ಕಾರ ಚುನಾವಣೆ ನಡೆಸುವ ಪರಿಸ್ಥಿತಿಯಲ್ಲಿ ಇಲ್ಲದಿರುವುದರಿಂದ ಶಂಕರಪ್ಪ ಅವರು ರಾಜೀನಾಮೆ ನೀಡುವಂತೆ ಮಾಡಿ ಗೌಡರ ಆಯ್ಕೆಗೆ ಅನುವು ಮಾಡಿಕೊಡಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ