ಯಡ್ಡಿ ಆರೋಗ್ಯ ವಿಚಾರಣೆಗೆ ಸಿಎಂ, ಸಚಿವರ ದಂಡು ಆಸ್ಪತ್ರೆಗೆ

ಭಾನುವಾರ, 16 ಅಕ್ಟೋಬರ್ 2011 (14:31 IST)
PR
ಡಿನೋಟಿಫಿಕೇಶನ್ ಹಗರಣದ ಆರೋಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಯದೇವ್ ಆಸ್ಪತ್ರೆಗೆ ದಾಖಲಾಗಿದ್ದರಿಂದ, ಅವರ ಆರೋಗ್ಯ ವಿಚಾರಣೆಗೆ ಮುಖ್ಯಮಂತ್ರಿ ಸದಾನಂದ ಗೌಡ ಸೇರಿದಂತೆ ಸಚಿವ ಶಾಸಕರ ದಂಡು ಆಸ್ಪತ್ರೆಗೆ ಧಾವಿಸಿದೆ.

ನಿನ್ನೆ ರಾತ್ರಿ ಆನಾರೋಗ್ಯದಿಂದಾಗಿ ಪರಪ್ಪನ ಅಗ್ರಹಾರ ಜೈಲಿನಿಂದ ಜಯದೇವ್ ಆಸ್ಪತ್ರೆಗೆ ದಾಖಲಾಗಿದ್ದ ಯಡಿಯೂರಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸದಾನಂದ ಗೌಡ ಯಡಿಯೂರಪ್ಪ ಆರೋಗ್ಯವನ್ನು ವಿಚಾರಿಸಿದರು ಎಂದು ಮೂಲಗಳು ತಿಳಿಸಿವೆ.

ಸಚಿವೆ ಶೋಭಾ ಕರಂದ್ಲಾಜೆ, ಗೃಹ ಸಚಿವ ಆರ್.ಅಶೋಕ್. ರೇಣುಕಾಚಾರ್ಯ, ಬಸವರಾಜ್ ಬೋಮ್ಮಾಯಿ ಸೇರಿದಂತೆ ಅನೇಕ ಸಚಿವರ ದಂಡು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ನಿನ್ನೆ ರಾತ್ರಿ ಊಟ ಮಾಡಿದ ನಂತರ ಮೂರು ವಾಂತಿ ಮಾಡಿಕೊಂಡಾಗ ಎದೆನೋವು ಕಾಣಿಸಿಕೊಂಡಿದ್ದರಿಂದ, ಕೂಡಲೇ ಜಯದೇವ್ ಆಸ್ಪತ್ರೆಗೆ ದಾಖಲಿಸುವಂತೆ ಜೈಲಿನ ವೈದ್ಯರು ಸೂಚನೆ ನೀಡಿದ್ದರು.

ಇದೀಗ ಜಯದೇವ್ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಯಡಿಯೂರಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ. 48 ಗಂಟೆಗಳ ಕಾಲ ಸಂಪೂರ್ಣ ನಿಗಾವಹಿಸಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ