ಬಳ್ಳಾರಿ ಗ್ರಾಮಾಂತರ ಉಪಚುನಾವಣೆ ಪ್ರಕ್ರಿಯೆ ಮುಂದುವರಿದಿರುವಂತೆಯೇ ರಾಜ್ಯ ಆಡಳಿತಾರೂಢ ಬಿಜೆಪಿ ಪಕ್ಷದ ಅಭ್ಯರ್ಥಿ ಆಯ್ಕೆ ಕಸರತ್ತು ಬಿರುಸುಗೊಂಡಿದೆ.
ಮೂರು ಮಾನದಂಡ ಬಳಕೆಯೊಂದಿಗೆ ಬಿಜೆಪಿ ಅಭ್ಯರ್ಥಿಯ ಆಯ್ಕೆ ನಡೆಯಲಿದೆ ಎಂದು ಸಿಎಂ ಸದಾನಂದ ಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ರಾಜಕೀಯ ದೃಷ್ಟಿಕೋನದಲ್ಲಿ ಯಾರಾಗಬಹುದೆಂಬುದನ್ನು ಚರ್ಚಿಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು ಎಂದು ಸಿಎಂ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಮತ್ತೊಂದೆಡೆ ಭಾನುವಾರ ಬಳ್ಳಾರಿಗೆ ಭೇಟಿ ನೀಡಿರುವ ಬಿಜೆಪಿ ಚುನಾವಣಾ ವೀಕ್ಷಕರು ಅಭಿಪ್ರಾಯ ಸಂಗ್ರಹಣೆ ನಡೆಸಿದ್ದಾರೆ. ಆನಂತರ ಮಾತನಾಡಿದ ಚುನಾವಣಾ ವೀಕ್ಷಕ ರಘುನಾಥ್ ಮಲ್ಕಾಪುರೆ. ಶ್ರೀರಾಮುಲು ಅವರೇ ನಮ್ಮ ಪಕ್ಷದ ಅಭ್ಯರ್ಥಿ ಎಂದು ತಿಳಿಸಿದ್ದಾರೆ.
ಬಿಜೆಪಿ ಗ್ರೀನ್ ಸಿಗ್ನಲ್...ಗುಟ್ಟು ರಟ್ಟು ಮಾಡದ ಶ್ರೀರಾಮುಲು... ಈ ನಡುವೆ ಬಿಜೆಪಿ ವೀಕ್ಷಕರು ಮಾಜಿ ಸಚಿವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುವುದು ಎಂದು ಘೋಷಿಸಿದ್ದರ ಹೊರತಾಗಿಯೂ ಶ್ರೀರಾಮುಲು ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.
ಮೂಲಗಳ ಪ್ರಕಾರ ಬಿಜೆಪಿ ಚುನಾವಣಾ ವೀಕ್ಷಕರಿಗೆ ಶ್ರೀರಾಮುಲು ಅವರನ್ನು ಭಾನುವಾರ ಬೆಳಗ್ಗೆ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಇದರಂತೆ ಮಾಜಿ ಸಚಿವರ ಮುಂದಿನ ನಡೆ ಏನಾಗಿರಬಹುದು ಎಂಬುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.