ಬಳ್ಳಾರಿ ಗ್ರಾಮಾಂತರ ಚುನಾವಣೆ ಶ್ರೀರಾಮುಲು ಬಂಡಾಯದಿಂದ ಕಂಗಾಲಾಗಿರುವ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ತೀವ್ರ ಕಸರತ್ತು ನಡೆಸಿದ್ದು,ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಮನೆಯಲ್ಲಿ ಗುರುವಾರ ಸಭೆ ನಡೆಸಲಾಯಿತು.
ಬಿಜೆಪಿ ರಾಷ್ಟ್ರೀಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಹಾಗೂ ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷ ಅಶೋಕ್ ಅವರನ್ನು ಆಯ್ಕೆ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎನ್ನಲಾಗಿದೆ. ಈಗಾಗಲೇ ಇಬ್ಬರಿಗೂ ಬಳ್ಳಾರಿಗೆ ತೆರಳಿ ಬಿ.ಫಾರಂ ಇಲ್ಲದೆಯೇ ನಾಮಪತ್ರ ಸಲ್ಲಿಸಲು ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಸೂಚಿಸಿದ್ದಾರೆ ಎನ್ನಲಾಗಿದೆ. ನಾಗೇಂದ್ರ ಹಾಗೂ ಅಶೋಕ್ ಅವರು ಈಗಾಗಲೇ ಬಳ್ಳಾರಿಗೆ ತೆರಳಿದ್ದಾರೆ.
ಬುಧವಾರ ಶ್ರೀರಾಮುಲು ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸಾವಿರಾರು ಜನರು ಸೇರಿದ್ದು ಬಿಜೆಪಿ ಮುಖಂಡರನ್ನು ಕಂಗಾಲಾಗಿಸಿದೆ. ಶ್ರೀರಾಮುಲು ತಂತ್ರಕ್ಕೆ ಪ್ರತಿ ತಂತ್ರ ರೂಪಿಸಲು ಸಜ್ಜಾಗಿರುವ ಬಿಜೆಪಿ ಮುಖಂಡರು ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ಶಾಸಕ ಆನಂದ ಸಿಂಗ್, ಹಾಗೂ ಬಳ್ಳಾರಿ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಆರೆಸ್ಸೆಸ್ ಮುಖಂಡರಾದ ಸತೀಶ್ ಹಾಗೂ ಸಂತೋಷ್ ಹಾಜರಿದ್ದರು.
ಮಧ್ಯಾಹ್ನ ಮತ್ತೊಮ್ಮೆ ಸಭೆ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕುರಿತು ಬಿಜೆಪಿ ಮುಖಂಡರು ಮಧ್ಯಾಹ್ನ 12.30ಕ್ಕೆ ಮತ್ತೊಮ್ಮೆ ಸಭೆ ಸೇರಲಿದ್ದು, ಬಳ್ಳಾರಿಯ ಬಿಜೆಪಿ ಮುಖಂಡರು ಹಾಗೂ ಆರೆಸ್ಸೆಸ್ ಮುಖಂಡರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ವಿವರ ನೀಡದ ಈಶ್ವರಪ್ಪ ಸಭೆಯ ನಂತರ ಡಿ.ವಿ.ಸದಾನಂ ಗೌಡರ ನಿವಾಸದಿಂದ ಹೊರ ಬಂದ ಈಶ್ವರಪ್ಪ ಅವರು ಬಳ್ಳಾರಿಯ ಅಭ್ಯರ್ಥಿಯ ಆಯ್ಕೆಯ ಕುರಿತು ಪತ್ರಕರ್ತರಿಗೆ ಯಾವುದೇ ವಿವರ ನೀಡಲು ನಿರಾಕರಿಸಿದರು.