ರಾಮುಲು ತಾಯಿ ರೂಪದ ಪಕ್ಷವನ್ನೇ ಬದಲಿಸಿದ್ದಾರೆ: ಸುರೇಶ್‌‌ಕುಮಾರ್

ಶನಿವಾರ, 19 ನವೆಂಬರ್ 2011 (10:06 IST)
PR
ಬಿಜೆಪಿ ತಾಯಿ ಸ್ವರೂಪ ಎಂದು ಕರೆದುಕೊಂಡಿದ್ದ ಶ್ರೀರಾಮುಲು ಈಗ ತಾಯಿಯನ್ನು ಬದಲಿಸಿದ್ದಾರೆ ಎಂದು ಕಾನೂನು ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಸಚಿವ ಸುರೇಶ್ ಕುಮಾರ್ ಮಾತನಾಡಿ, ಸಾಮಾನ್ಯವಾಗಿ ಯಾರೂ ತಾಯಿಯನ್ನು ಬದಲಿಸುವುದಿಲ್ಲ. ಅವರು ರಾಜೀನಾಮೆ ನೀಡಿದ ಕಾರಣವೇ ಬೇರೆ. ಈಗ ಬಿಜೆಪಿ ವಿರುದ್ಧ ಮಾಡುತ್ತಿರುವ ಆರೋಪವೇ ಬೇರೆ ಎಂದು ಮಾರ್ಮಿಕವಾಗಿ ನುಡಿದರು.

ಗಣಿವರದಿಯಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತಮ್ಮ ಮನಸ್ಸಿಗೆ ನೋವು ಉಂಟಾಗಿದ್ದು, ಆದರಿಂದ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದರು. ಇದರಿಂದ ಬಿಜೆಪಿ ಮುಖಂಡರು ಅವರ ಮನವೊಲಿಸಲು ಪ್ರಯತ್ನಿಸಿದರು. ಬಳ್ಳಾರಿ ನಾಗರಿಕರು ನೀಡಿದ ಗೌರವವನ್ನೇ ಅವರಿಗೆ ಪಕ್ಷ ನೀಡಿದೆ. ಆದರೆ, ಯಾವ ಕಾರಣಕ್ಕೆ ಬಿಜೆಪಿ ವಿರುದ್ಧ ಆರೋಪಿಸುತ್ತಿದ್ದಾರೋ ಗೊತ್ತಿಲ್ಲ ಎಂದರು.

ಯಾವುದೇ ನಿರ್ಧಾರ ಹುಡುಗಾಟವಾಗಬಾರದು. ಅದರಲ್ಲಿ ಗಂಭೀರತೆ ಇರಬೇಕು. ಉಪಚುನಾವಣೆಯನ್ನು ಯಾರೂ ಬಯಸಿರಲಿಲ್ಲ ಅವರು ತೆಗೆದುಕೊಂಡ ನಿರ್ಧಾರದಿಂದ ಈ ಉಪಚುನಾವಣೆ ಬಂದಿದೆ. ನವೆಂಬರ್ 30 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಜನತೆ ತಕ್ಕಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.

ಶ್ರೀ ರಾಮುಲು ರಾಜ್ಯಮಟ್ಟದ ನಾಯಕರಾಗಲು ಬಿಜೆಪಿ ಸರಕಾರವೇ ಕಾರಣವಾಗಿದೆ. ಪಕ್ಷದಿಂದಲೇ ಅವರಿಗೆ ಹೆಸರು ಕೀರ್ತಿ ಬಂದಿದೆ. ಈಗ ಪಕ್ಷ ತೊರೆದಿರುವುದು ಸೂಕ್ತ ನಿರ್ಧಾರವಲ್ಲ. ಇದೀಗ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಕಾನೂನು ಸಚಿವ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ