ಪ್ರಧಾನಿಯಾಗೋ ಕನಸಿಗಾಗಿ ಆಡ್ವಾಣಿ ರಥಯಾತ್ರೆ: ಮೊಯ್ಲಿ

ಭಾನುವಾರ, 20 ನವೆಂಬರ್ 2011 (17:34 IST)
ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ರಥಯಾತ್ರೆ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ, ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ, ತಾವು ಮುಂದಿನ ಪ್ರಧಾನಿಯಾಗಬೇಕೆಂಬ ವೈಯಕ್ತಿಕ ಅಜೆಂಡಾದ ಮೇಲೆ ಅವರು ರಥಯಾತ್ರೆ ನಡೆಸಿರುವುದಾಗಿ ಆರೋಪಿಸಿದರು.

ಈ ಮೊದಲು ಪ್ರಧಾನಿ ಗದ್ದುಗೆಗೆ ಏರಬೇಕೆಂಬ ಅವರ ಕನಸು ಭಗ್ನವಾಗಿತ್ತು. ಇದೀಗ ರಥಯಾತ್ರೆ ಮಾಡುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಹೊರಟಿದ್ದಾರೆಂದು ಭಾನುವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.

ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರ ಹೋರಾಟ ನೋಡಿದ ಮೇಲೆ ಆಡ್ವಾಣಿಯವರಿಗೆ ಈ ರಥಯಾತ್ರೆಯ ಕಲ್ಪನೆ ಬಂದಿದೆ. ಅಲ್ಲದೇ ಆಡ್ವಾಣಿಯವರು ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯಷ್ಟು ದೊಡ್ಡ ಮನುಷ್ಯ ಕೂಡ ಅಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬಿಜೆಪಿ ಮುಖಂಡರು ಮೊದಲು ತಮ್ಮ ಪಕ್ಷದಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲಿ ಎಂದು ಸಲಹೆ ನೀಡಿದರು.

ವೆಬ್ದುನಿಯಾವನ್ನು ಓದಿ