ಶ್ರೀರಾಮುಲು ಜಯ ಬಿಜೆಪಿಗೆ ಎಚ್ಚರಿಕೆ ಗಂಟೆ: ವರ್ತೂರು ಪ್ರಕಾಶ್

ಭಾನುವಾರ, 4 ಡಿಸೆಂಬರ್ 2011 (12:54 IST)
PR
ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಭರ್ಜರಿ ಜಯಭೇರಿ ಬಾರಿಸಿದ ಬೆನ್ನಲ್ಲೇ, ಶ್ರೀರಾಮುಲು ಗೆಲುವು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಎಂದು ಜವಳಿ ಖಾತೆ ವರ್ತೂರು ಪ್ರಕಾಶ್ ಭವಿಷ್ಯ ನುಡಿದಿದ್ದಾರೆ.

ಬಳ್ಳಾರಿ ಉಪ ಚುನಾವಣೆಯ ಫಲಿತಾಂಶದ ನಂತರ ಭಾನುವಾರ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ನಾಯಕರು ಭಿನ್ನಮತವನ್ನು ಮರೆತರೇ ಮಾತ್ರ ಪಕ್ಷಕ್ಕೆ ಉಳಿಗಾಲ. ಇಲ್ಲವಾದರೆ ಪಕ್ಷಕ್ಕೆ ಗಂಡಾಂತರ ಕಾದಿದೆ ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ.

ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ಬಿಜೆಪಿಗೆ ಬೆಂಬಲ ಕೊಟ್ಟಿದ್ದ ವರ್ತೂರು ಪ್ರಕಾಶ್ ಬಿಜೆಪಿ ವಿರುದ್ಧವೇ ತಿರುಗಿ ಬಿದ್ದಿದ್ದರು. ನಂತರ ಸ್ವಲ್ಪ ಸಮಯ ಕಾಂಗ್ರೆಸ್, ಜೆಡಿಎಸ್ ಸಖ್ಯ ಬೆಳೆಸಿದ್ದರು. ನಂತರ ಮತ್ತೆ ಯಡಿಯೂರಪ್ಪನವರಿಗೆ ಬಹುಪರಾಕ್ ಹೇಳಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ನಂತರ ಸಚಿವಗಿರಿಯೂ ಗಿಟ್ಟಿಸಿಕೊಂಡಿದ್ದು ಜಗಜ್ಜಾಹೀರಾದ ವಿಷಯವೇ.

ಇತ್ತೀಚೆಗಷ್ಟೇ ಕನಕ ಜಯಂತ್ಯೋತ್ಸವ ಸಮಾರಂಭದಲ್ಲಿ ರಾಜ್ಯದಲ್ಲಿ ಕುರಿ ಮೇಯಿಸುವ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಗದ್ದುಗೆಗೆ ಏರಬೇಕೆಂಬುದು ತನ್ನ ಆಸೆ ಎಂದಿದ್ದರು.

ವೆಬ್ದುನಿಯಾವನ್ನು ಓದಿ