ನನ್ನ ಜೈಲಿಗೆ ಕಳಿಸಿದ್ದೇ ಈಶ್ವರಪ್ಪ-ಬಿಎಸ್‌ವೈ; ಒಳಜಗಳ ಬೀದಿಗೆ

ಗುರುವಾರ, 29 ಡಿಸೆಂಬರ್ 2011 (11:50 IST)
PR
'ನನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಜೈಲಿಗೆ ಕಳುಹಿಸಿದ್ದೇ ಕೆ.ಎಸ್.ಈಶ್ವರಪ್ಪ. ಇಷ್ಟಾದ್ರೂ ಈಶ್ವರಪ್ಪಗೆ ತೃಪ್ತಿಯಾಗಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇರ ವಾಗ್ದಾಳಿ ನಡೆಸುವ ಮೂಲಕ ಬಿಜೆಪಿ ಆಂತರಿಕ ಒಳಜಗಳ ಬೀದಿಗೆ ಬಂದಂತಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾದ ದಿನದಿಂದ ಈಶ್ವರಪ್ಪನವರು ನನ್ನ ವಿರುದ್ಧ ಒಳಸಂಚು ಮಾಡುತ್ತಲೇ ಬಂದಿದ್ದಾರೆ. ಕೊನೆಗೂ ನನ್ನ ಜೈಲಿಗೆ ಕಳುಹಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇದೀಗ ನನ್ನ ಬಿಜೆಪಿ ಪಕ್ಷದಿಂದ ಹೊರಹಾಕುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ನನ್ನ ಬಿಜೆಪಿಯಿಂದ ಹೊರ ಹಾಕಿದ ಮೇಲೆ ತನಗೆ ನಾಯಕತ್ವ ಸಿಗುತ್ತದೆ ಎಂಬ ಆಸೆ ಈಶ್ವರಪ್ಪನವರದ್ದು. ತಾನು ಮುಖ್ಯಮಂತ್ರಿ ಗದ್ದುಗೆ ಏರಬೇಕೆಂಬ ಕನಸು ಕಾಣುತ್ತಿರುವ ಈಶ್ವರಪ್ಪನವರ ಆಸೆ ಆದಷ್ಟು ಬೇಗ ಈಡೇರಲಿ ಎಂದು ಯಡಿಯೂರಪ್ಪ ಈ ಸಂದರ್ಭದಲ್ಲಿ ವ್ಯಂಗ್ಯವಾಡಿದರು.

ಈಶ್ವರಪ್ಪ ಪ್ರತಿದಿನ ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಈಶ್ವರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಲ್ಲ. ಆದರೂ ತಾವೇ ಬಿಜೆಪಿ ಹೈಕಮಾಂಡ್ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ ಯಡಿಯೂರಪ್ಪ, ಇನ್ನಾದರೂ ಈಶ್ವರಪ್ಪ ಈ ರೀತಿ ತೇಜೋವಧೆ ಮಾಡುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.

ಯಾವ ಪಕ್ಷಕ್ಕೂ ಯಾವ ವ್ಯಕ್ತಿಯೂ ಅನಿವಾರ್ಯವಲ್ಲ. ನಾನು ಸಾಮಾನ್ಯ ಶಾಸಕನಾಗಿ ಕಾರ್ಯನಿರ್ವಹಿಸುತ್ತೇನೆ. ಬಿಜೆಪಿ ಹೈಕಮಾಂಡ್ ಬಳಿ, ಯಡಿಯೂರಪ್ಪನವರ ಮೇಲೆ ಸಾಕಷ್ಟು ಆರೋಪಗಳಿದ್ದು ಅವರಿಗೆ ಯಾವುದೇ ಸ್ಥಾನಮಾನ ನೀಡಬಾರದು ಎಂದು ಒತ್ತಡ ಹೇರಿರುವುದಾಗಿಯೂ ಯಡಿಯೂರಪ್ಪ ಹೇಳಿದರು.

ನಾನು ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳಲ್ಲ. ಜನವರಿ 15ರ ನಂತರ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಕಾರ್ಯಕರ್ತರ, ಜನರ ಅಭಿಪ್ರಾಯ ಸಂಗ್ರಹಿಸಿದ ನಂತರ ಬಿಜೆಪಿ ಹೈಕಮಾಂಡ್ ಜತೆ ಚರ್ಚೆ ನಡೆಸಿದ ಮೇಲೆ ನನ್ನ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.

ನಮ್ಮ ಪಕ್ಷದೊಳಗೆ ಯಾವುದೇ ಒಳಜಗಳವಿಲ್ಲ, ಇದೆಲ್ಲಾ ಮಾಧ್ಯಮದ ಸೃಷ್ಟಿ ಎಂದೆಲ್ಲ ಬುಸುಗುಡುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪನವರ ನಿಜ ಬಂಡವಾಳ ಇದೀಗ ಬಟಾಬಯಲಾದಂತಾಗಿದೆ.

ವೆಬ್ದುನಿಯಾವನ್ನು ಓದಿ