ಮತ್ತೆ ಮುಖ್ಯಮಂತ್ರಿ ಆಗಿಯೇ ಆಗ್ತೇನೆ: ಯಡಿಯೂರಪ್ಪ ಶಪಥ

ಶುಕ್ರವಾರ, 30 ಡಿಸೆಂಬರ್ 2011 (12:07 IST)
PR
ನಾನು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿಯೇ ತೀರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಪಥ ತೊಟ್ಟಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಟಿ.ದಾಸರಹಳ್ಳಿಯಲ್ಲಿ ನಡೆದ ವೀರಶೈವ ಸಮಾಜದ ಸಮಾರಂಭದಲ್ಲಿ ತೀವ್ರ ಭಾವೋದ್ವೇಗದಿಂದ ಮಾತನಾಡಿದ ಯಡಿಯೂರಪ್ಪ, ಯಾವ ತಪ್ಪು ಮಾಡದಿದ್ದ ನನ್ನ ವಿರುದ್ಧ ಷಡ್ಯಂತ್ರ ನಡೆಸಿ ಜೈಲಿಗೆ ಅಟ್ಟಿದ್ದಾರೆ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ಮತ್ತೊಮ್ಮೆ ಮುಖ್ಯಮಂತ್ರಿಯಾಗಿಯೇ ಸಿದ್ದ. ಅದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದು ಮನವಿ ಮಾಡಿಕೊಂಡರು.

ದೇಶದಲ್ಲಿ ಯಾವ ಮುಖ್ಯಮಂತ್ರಿಯೂ ಪಡದ ಕಷ್ಟಗಳನ್ನು ನಾನು ಪಟ್ಟಿದ್ದೇನೆ. ನನಗೆ ಕೊಡಬಾರದ ಕಷ್ಟ ಕೊಟ್ಟಿದ್ದಾರೆ. ನನಗೆ ತುಂಬಾ ಜನ ಶತ್ರುಗಳಿದ್ದಾರೆ. ಇಷ್ಟಕ್ಕೂ, ನಾನು ಮಾಡಿದ ತಪ್ಪಾದರೂ ಏನು? ರಾಜ್ಯದ, ಜನರ ಅಭಿವೃದ್ಧಿಗಾಗಿ ಶ್ರಮಿಸಿದ್ದು ತಪ್ಪೇ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಳೇಹೊನ್ನೂರು ರಂಭಾಪುರಿ ಮಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಜ್ಯದ ಜನತೆಯ ಸೇವೆ ಮಾಡಲು ಯಡಿಯೂರಪ್ಪನವರಿಗೆ ಅವರಿಗೆ ಮತ್ತೊಂದು ಅವಕಾಶ ನೀಡಬೇಕು. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿಯಲ್ಲಿ ಮತ್ತೊಮ್ಮೆ ಸಾಗುವಂತಾಗಬೇಕು ಎಂದರು.

ತನ್ನನ್ನು ಜೈಲಿಗೆ ಕಳುಹಿಸುವಲ್ಲಿ ಪಿತೂರಿ ನಡೆಸಿದ್ದೇ ಕೆ.ಎಸ್.ಈಶ್ವರಪ್ಪ ಎಂದು ಯಡಿಯೂರಪ್ಪ ನೇರವಾಗಿ ಆರೋಪಿಸುವ ಮೂಲಕ ಬಿಜೆಪಿ ಒಳಜಗಳ ಬೀದಿಗೆ ಬಿದ್ದಿತ್ತು. ಇದೀಗ ಬಿಜೆಪಿ ಪಾಳಯದಲ್ಲಿ ಸಿಎಂ ಗಾದಿಗಾಗಿ ಪೈಪೋಟಿ ನಡೆಯುತ್ತಿದ್ದು, ಮುಂದಿನ ಬೆಳವಣಿಗೆ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ವೆಬ್ದುನಿಯಾವನ್ನು ಓದಿ