ಮುಸುಕಿನ ಗುದ್ದಾಟ-ಬಿಎಸ್ವೈ ಪ್ರವಾಸ ಅಧಿಕೃತವಲ್ಲ; ಈಶ್ವರಪ್ಪ
ಗುರುವಾರ, 19 ಜನವರಿ 2012 (10:07 IST)
ಉತ್ತರ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಬಕಾರಿ ಸಚಿವ ರೇಣುಕಾಚಾರ್ಯ ನಡೆಸುತ್ತಿರುವ ಪ್ರವಾಸ ಅಧಿಕೃತ ಕಾರ್ಯಕ್ರಮವಲ್ಲ. 2-3 ದಿನಗಳಲ್ಲಿ ಕೋರ್ ಕಮಿಟಿ ಸಭೆ ಸೇರಿ ಪ್ರವಾಸದ ಅಧಿಕೃತ ಪಟ್ಟಿ ಸಿದ್ದ ಪಡಿಸಲಿದೆ ಎಂದು ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳುವ ಮೂಲಕ ಪಕ್ಷದೊಳಗಿನ ಆಂತರಿಕ ಕಚ್ಚಾಟ ಮುಂದುವರಿದಂತಾಗಿದೆ.
15 ದಿನಗಳ ನಂತರ ಮೌನ ಮುರಿದ ಈಶ್ವರಪ್ಪ, ಯಡಿಯೂರಪ್ಪನವರ ಹೆಸರು ಹೇಳದೆ ಅವರ ಪ್ರವಾಸ ಅಧಿಕೃತವಲ್ಲ ಎಂದಿದ್ದಾರೆ. ಇದರಿಂದಾಗಿ ಬಿಜೆಪಿಯಲ್ಲಿನ ಮುಸುಕಿನ ಗುದ್ದಾಟ ಶಮನವಾಗಿಲ್ಲ ಎಂಬುದು ಮತ್ತಷ್ಟು ಸ್ಪಷ್ಟವಾದಂತಾಗಿದೆ.
ಬೆಂಗಳೂರು ನಗರ ಕಾರ್ಯಕಾರಿ ಸಮಿತಿ ಸಭೆ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಾಸಕರ ಕ್ಷೇತ್ರದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದರು. ಅದಕ್ಕೆ ಅಭಿನಂದನೆ ಸಲ್ಲಿಸುವ ಸಲುವಾಗಿ ಅವರನ್ನು ಶಾಸಕರು ಸನ್ಮಾನಿಸುತ್ತಿದ್ದಾರೆ. ಇದು ಪಕ್ಷದ ಅಧಿಕೃತ ಕಾರ್ಯಕ್ರಮವಲ್ಲ ಎಂದು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.