ಸರ್ಕಸ್ ಮಾಡಿ ಅಭಿವೃದ್ದಿ ಹೇಗೆ ಮಾಡಿದ್ರಿ?: ಬಿಎಸ್‌ವೈಗೆ ಎಚ್‌ಡಿಕೆ

ಶನಿವಾರ, 21 ಜನವರಿ 2012 (09:48 IST)
WD
ಬಿಜೆಪಿ ಸರ್ಕಾರ ಹುಚ್ಚರ ಸಂತೆ ಎಂಬುದನ್ನು ಯಡಿಯೂರಪ್ಪ ಅವರೇ ಒಪ್ಪಿಕೊಂಡಿರುವುದು ಸಂತಸದ ವಿಷಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಮೂರುವರೆ ವರ್ಷ ಸರ್ಕಸ್ ಕಂಪನಿಯಂತೆ ಸರ್ಕಾರ ನಡೆಸಿದ್ದೆ ಎಂದು ಯಡಿಯೂರಪ್ಪ ನೊಂದು ನುಡಿದಿದ್ದಾರೆ. ಹೀಗೆ ಸರ್ಕಸ್ ಮಾಡಿಕೊಂಡು ಅವರು ಜನರ ಆಶೋತ್ತರಗಳಿಗೆ ಹೇಗೆ ಸ್ಪಂದಿಸಿರಬಹುದು? ರಾಜ್ಯಕ್ಕೆ ಇನ್ನೇನು ಅಭಿವೃದ್ಧಿ ಮಾಡಿರಬಹುದು ಎಂಬುದನ್ನು ಜನರೇ ತೀರ್ಮಾನಿಸಲಿ. ಹೀಗಾಗಿಯೇ ಪ್ರತಿಯೊಂದು ಇಲಾಖೆಯೂ ಭ್ರಷ್ಟಾಚಾರದ ಕೂಪವಾಗಿದೆ ಎಂದು ಆರೋಪಿಸಿದರು.

ಅಲ್ಲದೇ ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಆರ್ಎಸ್ಎಸ್ ಮುಖಂಡರು ಜೋಳಿಗೆ ತುಂಬಿಸಿಕೊಂಡರು. ಈಗ ಜೋಳಿಗೆ ಖಾಲಿ ಆಗಿರುವ ಹಿನ್ನೆಲೆಯಲ್ಲಿ ಈ ಮುಖಂಡರು ಸದಾನಂದ ಗೌಡರ ಮನೆಯತ್ತ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಇಂಥವರ ಬಗ್ಗೆ ಮುಖ್ಯಮಂತ್ರಿ ಎಚ್ಚರಿಕೆಯಿಂದ ಇರಲಿ ಎಂದು ಸಲಹೆ ನೀಡಿದರು.

ಲೋಕೋಪಯೋಗಿ ಇಲಾಖೆಯಲ್ಲಿ ರಾಜಾ ರೋಷವಾಗಿ ನಡೆಯುತ್ತಿರುವ ಲಂಚಾವತಾರಕ್ಕೂ ಮುಖ್ಯಮಂತ್ರಿ ಸದಾನಂದ ಗೌಡರು ಕಡಿವಾಣ ಹಾಕಲಿ ಎಂದರು.

ವೆಬ್ದುನಿಯಾವನ್ನು ಓದಿ