ಹಾಲಿ ಸಿಎಂ. ಡಿ.ವಿ. ಸದಾನಂದ ಗೌಡ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಡುವಿನ ಭಿನ್ನಾಭಿಪ್ರಾಯ ಮುಂದುವರಿದಿದ್ದು, ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ನಡೆದ ಸಮಾರಂಭವೇ ಇದಕ್ಕೆ ಸಾಕ್ಷಿಯಾಯಿತು.
ಅಂಬೇಡ್ಕರ್ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸದಾನಂದಗೌಡ ಹಾಗೂ ಯಡಿಯೂರಪ್ಪ ಅಕ್ಕಪಕ್ಕದಲ್ಲೇ ಕುಳಿತಿದ್ದರೂ ಒಂದೂ ಶಬ್ದವನ್ನು ಮಾತನಾಡಲೇ ಇಲ್ಲ. ಸಮಾರಂಭದ ಆಯೋಜಕರು ಮೊದಲು ಯಡಿಯೂರಪ್ಪ ಅವರನ್ನು ಸನ್ಮಾನಿಸಲು ಮುಂದಾದಾಗ ಸದಾನಂದ ಗೌಡರಿಗೆ ಮೊದಲು ಸನ್ಮಾನ ಮಾಡಿ ಎಂದು ಬಿಎಸ್ವೈ ಸೂಚಿಸಿದರು.
ಸನ್ಮಾನ ಸ್ವೀಕರಿಸಿದ ಸದಾನಂದ ಗೌಡರು ಇನ್ನೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು. ಈ ಹಿಂದೆ ದಾವಣಗರೆ ಮೊದಲಾದ ಊರುಗಳಲ್ಲಿ ನಡೆದ ಸಮಾರಂಭಗಳಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹಾಲಿ ಹಾಗೂ ಮಾಜಿ ಸಿಎಂಗಳು ಪರಸ್ಪರ ವಿರುದ್ಧವಾಗಿ ಮಾತನಾಡಿದ್ದರು.
ಭಿನ್ನಾಭಿಪ್ರಾಯ ನಿವಾರಿಸುವ ನಿಟ್ಟನಲ್ಲಿ ಹೈಕಮಾಂಡ್ ಕೂಡಾ ಸದಾನಂದ ಗೌಡ, ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಹೈಕಮಾಂಡ್ ಮಾತುಕತೆ ನಡೆಸಿದ್ದನ್ನಿ ಇಲ್ಲಿ ಸ್ಮರಿಸಬಹುದು.