ಯಡಿಯೂರಪ್ಪ ಬೆಂಬಲಿಗರಿಗೆ ಮುಂದಿದೆ ಮಾರಿಹಬ್ಬ: ಈಶ್ವರಪ್ಪ

ಮಂಗಳವಾರ, 24 ಜನವರಿ 2012 (10:12 IST)
PR
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಓಲೈಕೆಗಾಗಿ ಮನಬಂದಂತೆ ಹೇಳಿಕೆ ನೀಡುತ್ತಿರುವ ಅವರ ಬೆಂಬಲಿಗರಿಗೆ ಕಾದಿದೆ ಗ್ರಹಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಯಡಿಯೂರಪ್ಪನವರನ್ನು ಹೊಗಳಿ ಅಟ್ಟಕ್ಕೇರಿಸುತ್ತಿರುವ ವ್ಯಕ್ತಿಗಳು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದರಿಂದ ಸರಕಾರಕ್ಕೆ ಮಾನ ಮರ್ಯಾದೆ ಇಲ್ಲದಂತಾಗಿದೆ ಎಂದು ಕಿಡಿಕಾರಿದ್ದಾರೆ.

ಯಡಿಯೂರಪ್ಪನವರ ಆತ್ಮಿಯರ ಮುಂದೆಯೇ ಈಶ್ವರಪ್ಪ ಇಂತಹ ತೀಕ್ಷ್ಣ ನುಡಿಗಳಿಗೆ ಮೊರೆಹೋಗಿರುವುದು ಅಚ್ಚರಿ ಮೂಡಿಸಿತ್ತು.

ಬಿಎಸ್‌ವೈ ಹೊಗಳುಭಟರನ್ನು ಕರೆಯಿಸಿಕೊಂಡು ಬುದ್ದಿ ಹೇಳುತ್ತೇನೆ ಎಂದಾಗ ವೇದಿಕೆ ಮೇಲಿದ್ದ ಸಚಿವ ನಿರಾಣಿ, ಗೋವಿಂದ್ ಕಾರಜೋಳ ಇತರರು ದಿಗ್ಭ್ರಮೆಗೊಂಡರು.

ಪಕ್ಷದಲ್ಲಿ ಕೆಲ ವ್ಯಕ್ತಿಗಳಿಂದ ಗೊಂದಲಗಳು ಉಂಟಾಗಿವೆ. ಮುಂಬರುವ ದಿನಗಳಲ್ಲಿ ಗೊಂದಲಗಳು ಪರಿಹಾರವಾಗುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ