ಉಡುಪಿ ಮೋಜು; ಸದಾನಂದ ಗೌಡ್ರ ವಿರುದ್ದ ಶ್ರೀರಾಮುಲು ಗುಡುಗು

ಸೋಮವಾರ, 6 ಫೆಬ್ರವರಿ 2012 (23:48 IST)
PTI
ಉಡುಪಿಯ ಸೇಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸೋದ್ಯಮ ಉತ್ತೇಜನ ಹೆಸರಿನಲ್ಲಿ ಸರ್ಕಾರ ಆಯೋಜಿಸಿದ್ದ ಮೋಜು ಉತ್ಸವದಲ್ಲಿ ನಡೆದ ಅಕ್ರಮ ಚಟುಟಿಕೆಯನ್ನು ಪ್ರವಾಸೋದ್ಯಮ ಅಭಿವೃದ್ದಿ ಎಂದು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸದಾನಂದ ಗೌಡ ಅವರ ನಿಲುವನ್ನು ಬಲವಾಗಿ ವಿರೋಧಿಸಿರುವ ಶ್ರೀರಾಮುಲು, ಯಕ್ಷಗಾನ, ಕಂಬಳ, ಬಯಲಾಟ, ದೊಡ್ಡಾಟ, ಬೂತದ ಕೋಲ ಮುಂತಾದ ಕರಾವಳಿ ಉತ್ಸವಗಳ ಮೂಲಕ ಸಂಸ್ಕೃತಿಯನ್ನು ಬಿಂಬಿಸಿ ಆ ಮೂಲಕ ಪ್ರವಾಸೋದ್ಯಮ ಅಭಿವೃದ್ದಿಪಡಿಸಬೇಕೇ ಹೊರತು, ಅಕ್ರಮ ವ್ಯವಹಾರ, ಅಶ್ಲೀಲತೆಗೆ ಪ್ರೋತ್ಸಾಹಿಸುವ ಮೂಲಕವಲ್ಲ ಎಂದು ಗುಡುಗಿದ್ದಾರೆ.

ಸಾರ್ವಜನಿಕವಾಗಿ ಮಾದಕ ದ್ರವ್ಯ ಮಾರಾಟ ಮಾಡುವುದು, ಗಾಂಜಾ, ಮಧ್ಯಪಾನ ಸೇವಿಸಿದ ಅಮಲಿನಲ್ಲಿ ಸಾರ್ವಜನಿಕವಾಗಿ ಕಾಮಕೇಳಿ ನಡೆಸುವುದು, ಆ ಮೂಲಕ ಯುವ ಜನತೆಯನ್ನು ತಪ್ಪುದಾರಿಗೆಳೆಯಲು ಪ್ರೇರೇಪಿಸುವುದು ಸಂಸ್ಕೃತಿ ವಿರೋಧಿ ಚಟುವಟಿಕೆಯಾದೀತೆ ಹೊರತು ಅಂಥಹಾ ಅಕ್ರಮ ಚಟುವಟಿಕೆಗೆ ಪ್ರೋತ್ಸಾಹ ನೀಡುವುದೇ ಪ್ರವಾಸೋದ್ಯಮ ಅಭಿವೃದ್ದಿಯಾಗುವುದಿಲ್ಲ ಎಂದವರು ಸ್ಪಷ್ಟಪಡಿಸಿದರು.

ಸೇಂಟ್ ಮೇರೀಸ್ ನಲ್ಲಿ ಕೃಷ್ಣನ ವಿಗ್ರಹ ಸ್ಥಾಪಿಸುವ ಕುರಿತು ಜನಾರ್ಧನ ರೆಡ್ಡಿ ಕನಸು ಕಂಡಿದ್ದರು, ಅದೀಗ ಸಾಕಾರಗೊಳ್ಳಬೇಕಿದೆ ಎಂದು ರಾಮುಲು ತಿಳಿಸಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸದಾನಂದ ಗೌಡ, ಮಾಧ್ಯಮಗಳಲ್ಲಿ ಪ್ರಸಾರವಾದಂತೆ ಯಾವುದೇ ಅಕ್ರಮ ಚಟುವಟಿಕೆಯಾಗಲೀ, ಅಹಿತಕರ ಘಟನೆಯಾಗಲೀ ಇಲ್ಲಿ ನಡೆಯುತ್ತಿಲ್ಲ. ಈ ಕುರಿತು ಉಡುಪಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯವರಿಂದ ಸಂಪೂರ್ಣ ಮಾಹಿತಿ ತೆಗೆದುಕೊಳ್ಳಲಾಗಿದ್ದು, ಸೇಂಟ್ ಮೇರೀಸ್ ದ್ವೀಪದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ತಿಳಿದುಬಂದಿದೆ.

ಹಾಗಾಗಿ ಇದು ಕರಾವಳಿ ಅಭಿವೃದ್ದಿಗೆ ಕಲ್ಲು ಹಾಕುವ ಹುನ್ನಾರ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸದಾನಂದ ಗೌಡ, ಕರಾವಳಿಯನ್ನು ಗೋವಾ ಮಾದರಿ ಪ್ರವಾಸೋದ್ಯಮವನ್ನಾಗಿ ರೂಪಿಸಲು ನಡೆದ ಸಣ್ಣ ಪ್ರಯತ್ನಕ್ಕೆ ಎಲ್ಲೆಡೆ ಕಾಲೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.

ಪ್ರವಾಸೋದ್ಯಮದಿಂದ ರಾಜ್ಯದ ಆದಾಯ ಹೆಚ್ಚಾಗುತ್ತದೆ. ಹಾಗಾಗಿ ವಿದೇಶಿಯರನ್ನು ಆಕರ್ಷಿಸಲು ನಡೆದಿರುವ ಒಂದು ಸಣ್ಣ ಪ್ರಯತ್ನವಷ್ಟೆ. ಯಾರು ಏನೇ ವಿರೋಧಿಸಿದರು ಪ್ರವಾಸೋದ್ಯಮ ಅಭಿವೃದ್ದಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸಲು ನಾವು ಹಿಂದೇಟು ಹಾಕುವುದಿಲ್ಲ ಎಂದು ಸದಾನಂದ ಗೌಡ ಖಡಕ್ಕಾಗಿ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ