ಬಿಎಸ್‌ವೈ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಬೇಕು: ಲಕ್ಷ್ಮಿನಾರಾಯಣ

ಶನಿವಾರ, 25 ಫೆಬ್ರವರಿ 2012 (17:54 IST)
PR
ಕಳೆದ 40 ವರ್ಷಗಳಿಂದ ಪಕ್ಷ ಕಟ್ಟಿ ಬೆಳೆಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನಸ್ಸಿಗೆ ನೋವಾಗುವಂತೆ ಕೆಲವು ಮುಖಂಡರು ವರ್ತಿಸುತ್ತಿದ್ದು, ಇಂತಹ ಧೋರಣೆಯನ್ನು ಕೈಬಿಡಬೇಕು ಎಂದು ಬಿಜೆಪಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ ಮನವಿ ಮಾಡಿಕೊಂಡರು.

ಅವಿರತ ಹೋರಾಟದಿಂದ ಯಡಿಯೂರಪ್ಪನವರು ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಅವರು ಅಧಿಕಾರ ಕಳೆದುಕೊಂಡ ನಂತರ ಹಾಗೂ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ವಿಚಾರದಲ್ಲಿ ಕೆಲವರು ಅವರ ಮನಸ್ಸಿಗೆ ನೋವಾಗುವಂತೆ ವರ್ತಿಸಿರುವುದು ತಮಗೂ ಬೇಸರ ತಂದಿದೆ ಎಂದು ಹೇಳಿದರು.

ವಿಧಾನಸೌಧದ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದರೆ ಪಕ್ಷ ಹಾಗೂ ಸರ್ಕಾರಕ್ಕೂ ಒಳ್ಳೆಯದು ಎಂದರು.

ತಳಮಟ್ಟದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿರುವ ಕಾರ್ಯಕರ್ತರ ಮನಸ್ಸನ್ನು ಅರ್ಥ ಮಾಡಿಕೊಂಡು ನಾಯಕರು ಮುನ್ನಡೆಯಬೇಕಾಗಿದೆ. ವ್ಯಕ್ತಿಗತ ಪ್ರತಿಷ್ಠೆಗಳನ್ನು ಮುಂದಿಟ್ಟುಕೊಂಡು ವರ್ತಿಸುವುದು ಸರಿಯಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.

ವೆಬ್ದುನಿಯಾವನ್ನು ಓದಿ