ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ನಟಿ ರಮ್ಯಗೆ ನೋಟಿಸ್

ಗುರುವಾರ, 17 ಏಪ್ರಿಲ್ 2014 (08:01 IST)
PR
ನಟಿ, ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮ್ಯಾ ಅವರ ತಂದೆ ತಾವೇ ಎಂದು ಮಾನ್ಯ ಮಾಡಬೇಕೆಂದು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಬಿ.ಸಿ. ವೆಂಕಟೇಶ್ ಮತ್ತೊಂದು ಅರ್ಜಿ ಸಲ್ಲಿಸಿ, ವಿನಾಕಾರಣ ತಮ್ಮ ವಿರುದ್ಧ ಹೇಳಿಕೆ ನೀಡದಂತೆ ರಮ್ಯಾಗೆ ನಿರ್ದೇಶಿಸಬೇಕೆಂದು ಮನವಿ ಮಾಡಿದ್ದಾರೆ.

ಸಾಕು ತಂದೆ ಎನಿಸಿದ್ದ ದಿ. ಆರ್.ಟಿ. ನಾರಾಯಣ್ ಅವರು ಕಾನೂನಾತ್ಮಕವಾಗಿ ದತ್ತು ಪಡೆದಿಲ್ಲ. ಹೀಗಾಗಿ, ಅವರನ್ನು ರಮ್ಯಾ ಸಾಕು ತಂದೆ ಎಂದು ಮಾನ್ಯತೆ ಮಾಡಬಾರದೆಂದು ವೆಂಕಟೇಶ್ ಕೋರಿದ್ದಾರೆ.

ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕರಣ ಸಂಬಂಧ ಆಕ್ಷೇಪಣಾ ಹೇಳಿಕೆ ಸಲ್ಲಿಸುವಂತೆ ರಮ್ಯಾ ಹಾಗೂ ಅವರ ತಾಯಿ ರಂಜಿತಾ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಏ.29ಕ್ಕೆ ಮುಂದೂಡಿದ್ದಾರೆ.

ಈ ಸಂದರ್ಭದಲ್ಲಿ ವಾದ ಮಂಡಿಸಿದ ವೆಂಕಟೇಶ್ ಪರ ವಕೀಲ ಮೃತ್ಯುಂಜಯ ''ರಮ್ಯಾ ಅವರು ಮಾಧ್ಯಮಗಳ ಮೂಲಕ ವೆಂಕಟೇಶ್ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಬಾರದು. ರಮ್ಯಾ ಅವರನ್ನು ಆರ್.ಟಿ. ನಾರಾಯಣ್ ಅವರು ಹಿಂದೂ ಕಾಯಿದೆ ಪ್ರಕಾರ ದತ್ತು ಪಡೆದಿಲ್ಲ. ಹೀಗಾಗಿ, ರಮ್ಯಾ ಅವರನ್ನು ಆರ್.ಟಿ. ನಾರಾಯಣ್ ಅವರ ದತ್ತು ಪುತ್ರಿ ಎಂದು ಮಾನ್ಯತೆ ಮಾಡಬಾರದು,'' ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ವೆಬ್ದುನಿಯಾವನ್ನು ಓದಿ