2011ರ ವಾಣಿಜ್ಯ ಕ್ಷೇತ್ರ-ಗಗನಕ್ಕೇರಿದ ಚಿನ್ನದ ಬೆಲೆ, ರೂ.ಮೌಲ್ಯ ಕುಸಿತ
ಶನಿವಾರ, 31 ಡಿಸೆಂಬರ್ 2011 (16:02 IST)
PR
2011ರಲ್ಲಿ ವ್ಯಾಣಿಜ್ಯ ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಬಿಸಿ ಮುಟ್ಟಿಸಿದ್ದು ಮಾತ್ರ ಚಿನ್ನ ಮತ್ತು ಬೆಳ್ಳಿ ಬೆಲೆ ಗಗನಕ್ಕೇರಿದ್ದು. ಹೂಡಿಕೆದಾರರಿಗೆ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ಗಳಲ್ಲಿ ದೊರೆಯದಷ್ಟು ಆದಾಯವನ್ನು ಬಂಗಾರ ದಕ್ಕಿಸಿಕೊಟ್ಟಿತ್ತು. 10 ಗ್ರಾಂ ಚಿನ್ನ 29ಸಾವಿರಗಿಂತ ಹೆಚ್ಚಾಗುವ ಮೂಲಕ ಜನಸಾಮಾನ್ಯರಲ್ಲಿ ಆತಂಕ ಹುಟ್ಟಿಸಿತ್ತು.
ರೂಪಾಯಿ ಮೌಲ್ಯ ಕುಸಿತ: ರೂಪಾಯಿ ಬೆಲೆ ಪ್ರಸಕ್ತ ಸಾಲಿನಲ್ಲಿ ಡಾಲರ್ ಎದುರು ಸಾರ್ವಕಾಲಿಕ ಕುಸಿತಕ್ಕೀಡಾಯಿತು. ಡಿಸೆಂಬರ್ನಲ್ಲಿ ರೂಪಾಯಿ ಮೌಲ್ಯ 54ರೂ. ಸನಿಹಕ್ಕೆ ಪತನವಾಯಿತು. ಇದರಿಂದ ಸಾಫ್ಟ್ವೇರ್ ಸೇರಿದಂತೆ ಕೆಲವು ವಲಯಗಳಿಗೆ ಅನುಕೂಲವಾದರೂ ಹಲವರಿಗೆ ತೀವ್ರ ನಷ್ಟವಾಯಿತು.
ನಷ್ಟದಲ್ಲಿ ಕಿಂಗ್ಫಿಶರ್ ಏರ್ಲೈನ್ಸ್: ವೈಮಾನಿಕ ವಲಯದಲ್ಲಿ ಸಂಕಷ್ಟದ ಬಿರುಗಾಳಿ ಎದ್ದ ವರ್ಷವಿದು. ಮುಖ್ಯವಾಗಿ ವಿಜಯಮಲ್ಯ ಒಡೆತನದ ಕಿಂಗ್ಫಿಶರ್ ಏರ್ಲೈನ್ಸ್ ಮಾರ್ಚ್ ಅಂತ್ಯಕ್ಕೆ 1,027 ಕೋಟಿ ರೂ.ನಷ್ಟ ದಾಖಲಿಸಿತು. ಇಂಧನ ದರ ಹೆಚ್ಚಳ, ಸಾಲದ ಹೊರೆ ಮುಂತಾದ ಕಾರಣಗಳಿಂದ ಕಿಂಗ್ ಫಿಶರ್ ತನ್ನ ನೂರಾರು ವಿಮಾನ ಸಂಚಾರಗಳನ್ನು ರದ್ದುಪಡಿಸಿತು.
ಇನ್ಫೋಸಿಸ್ ಅಧ್ಯಕ್ಷ ಪಟ್ಟದಿಂದ ಮೂರ್ತಿ ನಿವೃತ್ತಿ: ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ (65) ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾಗಿದ್ದು, ಐಸಿಐಸಿಐ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಿ.ಕಾಮತ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು.
ಯುರೋಪ್ ಆರ್ಥಿಕ ಬಿಕ್ಕಟ್ಟು: ಯುರೋಪ್ನ ನಾನಾ ರಾಷ್ಟ್ರಗಳಲ್ಲಿ ಸಂಭವಿಸಿದ ಆರ್ಥಿಕ ಬಿಕ್ಕಟ್ಟು ಇಡೀ ಜಗತ್ತನ್ನು ತಲ್ಲಣಗೊಳಿಸಿತ್ತು. ಷೇರು ಮಾರುಕಟ್ಟೆಯನ್ನು ಕಂಗಾಲಾಗಿಸಿತು. ಗ್ರೀಸ್, ಪೋರ್ಚುಗಲ್, ಸ್ಪೇನ್, ಐರ್ಲೆಂಡ್, ಇಟಲಿ, ಫ್ರಾನ್ಸ್ ಮಾತ್ರವಲ್ಲದೆ ಜರ್ಮನಿಯಂತಹ ಬಲಾಢ್ಯ ರಾಷ್ಟ್ರಗಳು ತತ್ತರಿಸಿತ್ತು.
PR
ಮಾರುಕಟ್ಟೆಗೆ ಲಗ್ಗೆ ಇಟ್ಟ ಐಫೋನ್, ಐಪಾಡ್, ಸ್ಮಾರ್ಟ್ ಫೋನ್: ಐಫೋನ್, ಐಪಾಡ್, 3ಜಿ ಸೌಲಭ್ಯದ ಸ್ಮಾರ್ಟ್ ಫೋನ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು. ಆಂಡ್ರಿಡ್ ಮೊಬೈಲ್ ಸಾಫ್ಟ್ವೇರ್ನಿಂದ ಸ್ಮಾರ್ಟ್ ಫೋನ್ ಮಾರುಕಟ್ಟೆ ಅನೂಹ್ಯವಾಗಿ ವಿಸ್ತರಿಸಿತು. ಭಾರತದಲ್ಲಿ ನೋಕಿಯಾ ಪ್ರಾಬಲ್ಯವಿದ್ದರೂ ಈ ವರ್ಷ ಸ್ಯಾಮ್ಸಂಗ್, ಬ್ಲ್ಯಾಕ್ ಬೆರಿ ಮುಂತಾದವುಗಳ ಉತ್ಪನ್ನಗಳು ಜನಪ್ರಿಯವಾಯಿತು.
ಅಕ್ರಮ ಗಣಿಗಾರಿಕೆ ಸದ್ದು-ಆರ್ಥಿಕ ಹೊಡೆತ ಅಕ್ರಮ ಗಣಿಗಾರಿಕೆಯ ಕರ್ಮಕಾಂಡಗಳ ಪರಿಣಾಮ ಗಣಿ ಉದ್ದಿಮೆಗೆ ತೀವ್ರ ಹೊಡೆತ ಬಿತ್ತು. ವರ್ಷದುದ್ದಕ್ಕೂ ಅಕ್ರಮ ಗಣಿಗಾರಿಕೆ ಸುದ್ದಿಯಾಯಿತು. ಕರ್ನಾಟಕದಲ್ಲಿ ರಾಜಕೀಯವಾಗಿ ಅಲ್ಲೋಲಕಲ್ಲೋಲ ಸೃಷ್ಟಿ. ಅದಿರು ರಫ್ತಿನಲ್ಲಿ ಗಣನೀಯ ಇಳಿಕೆ. ಅದಿರು ರಪ್ತು ನಿಷೇಧದಿಂದ ಸಾವಿರಾರು ಕಾರ್ಮಿಕರು ಕೆಲಸವಿಲ್ಲದೆ ಪರದಾಡುವಂತಾಗಿತ್ತು.
ಆರ್ಥಿಕ ಬೆಳವಣಿಗೆ ನಿಧಾನಗತಿ-ಹಣದುಬ್ಬರ ಭಾರತದ ಆರ್ಥಿಕ ಬೆಳವಣಿಗೆ ಈ ವರ್ಷ ನಿಧಾನಗತಿಯಲ್ಲಿತ್ತು. ಆಹಾರ ಹಣದುಬ್ಬರ ವರ್ಷದ ದ್ವಿತೀಯಾರ್ಧದ ನಂತರ ಇಳಿದರೂ, ಹಣದುಬ್ಬರದ ಒತ್ತಡ ಉಂಟಾಗಿತ್ತು. ಮುಖ್ಯವಾಗಿ ಬಡ್ಡಿದರ ಹೆಚ್ಚಳ ಮತ್ತು ಜಾಗತಿಕ ಬೇಡಿಕೆ ಇಳಿಕೆಯ ಪರಿಣಾಮ ಉತ್ಪಾದನೆ ವಲಯದ ಬೆಳವಣಿಗೆ ಕುಸಿಯಿತು.